Header Ads Widget

Responsive Advertisement

ಸುಳ್ಯದ ‘ಬಂಗಾರ’ ಎಸ್. ಅಂಗಾರರಿಗೆ ಸಚಿವ ಸ್ಥಾನ; ಮೊಗೇರ ಸಮಾಜ ರಾಜಕೀಯವಾಗಿಯೂ ಮುಂದೆ ಬರುತ್ತಿರುವುದರ ಸಂಕೇತ


ಮೊಗೇರ ಸಮಾಜ ಕಳೆದ ಹಲವಾರು ವರ್ಷಗಳಿಂದ ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದೆ. ಇದೀಗ ಸುಳ್ಯದಿಂದ ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಂಗಾರ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಸಂಪಟ ವಿಸ್ತರಣೆಯ ಸಂದರ್ಭ ಅವಕಾಶ ನೀಡಿರುವುದು ಸಂತಸವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿಗಳನ್ನು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟಿಲ್ ಅವರನ್ನು ಸಮಾಜದ ಪರವಾಗಿ ಅಭಿನಂದಿಸುವುದಾಗಿ ಕೊಡಗು ಮೊಗೇರ ಸಮಾಜದ ಅಧ್ಯಕ್ಷ ಗೌತಮ್ ಶಿವಪ್ಪ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಶಾಸಕ ಅಂಗಾರರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ, ಮುಂಬರುವ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿನ ಮೊಗೇರ ಸಮಾಜ ಬಾಂಧವರನ್ನು ಕಡೆಗಣಿಸದೆ ರಾಜಕೀಯ ಪ್ರಾತಿನಿಧ್ಯವನ್ನು ನೀಡುವಂತೆ ಸಮಾಜದ ಅಧ್ಯಕ್ಷ ಗೌತಮ್ ಶಿವಪ್ಪ ಮನವಿ ಮಾಡಿದ್ದಾರೆ.

ಮಡಿಕೇರಿಯ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಸುಮಾರು 30 ರಿಂದ 35 ಸಾವಿರದಷ್ಟು ಮೊಗೇರ ಸಮಾಜ ಬಾಂಧವರಿದ್ದಾರೆ. ಇವರಲ್ಲಿ ಶಿಕ್ಷಣವಂತರು, ಉತ್ತಮ ನಾಯಕತ್ವದ ಮನೋಭಾವವನ್ನು ಹೊಂದಿರುವವರು ಸಾಕಷ್ಟು ಮಂದಿ ಇದ್ದು, ಇವರು ಯಾರಿಗೂ ಕಡಿಮೆ ಇಲ್ಲ. ಹೀಗಿದ್ದೂ ಇಲ್ಲಿಯವರೆಗೂ ಮೊಗೇರ ಸಮಾಜ ಬಾಂಧವರಿಗೆ ರಾಜಕೀಯವಾಗಿ ಉತ್ತಮ ಸ್ಥಾನಮಾನ ದೊರತಿಲ್ಲ. ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸೇರಿದಂತೆ ವಿಧಾನಸಭಾ ಚುನಾವಣೆಯ ಸಂದರ್ಭಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳು ಮೊಗೇರ ಸಮಾಜವನ್ನು ಕಡೆಗಣಿಸದೆ, ಅವಕಾಶಗಳನ್ನು ಕಲ್ಪಿಸುವಂತೆ ಕೊಡಗು ಮೊಗೇರ ಸಮಾಜದ ಅಧ್ಯಕ್ಷ ಗೌತಮ್ ಶಿವಪ್ಪ ಮನವಿ ಮಾಡಿದರು.

ಸಮಾಜದ ಗೌರವಾಧ್ಯಕ್ಷ ಹಾಗೂ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ ಮಾತನಾಡಿ, ಸುಮಾರು ಆರು ಬಾರಿ ಗೆಲುವು ಸಾಧಿಸಿ ಸಮುದಾಯಕ್ಕೆ ಹೆಮ್ಮೆ ತಂದಿರುವ. ಸುಳ್ಯದ ‘ಬಂಗಾರ’ ವೆಂದೇ ಪ್ರಖ್ಯಾತಿ ಪಡೆದಿರುವ ಎಸ್.ಅಂಗಾರ ಅವರಿಗೆ ಯಾವುದೇ ಖಾತೆಯನ್ನು ನೀಡಿದರು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. 


ಈ ಹಿಂದೆ ಅವರಿಗೆ ಸಚಿವ ಸ್ಥಾನ ಸಿಗಬೇಕೆಂದು ಸಮಾಜ ಪ್ರಯತ್ನ ನಡೆಸಿತ್ತಾದರೂ ಅಂಗಾರ ಅವರೇ ಸಚಿವ ಸ್ಥಾನಕ್ಕಾಗಿ ಇಂತಹ ಒತ್ತಡಗಳು ಬೇಡ ಎನ್ನುವ ಮೂಲಕ ರಾಜಕೀಯ ಲಾಬಿಯನ್ನು ತಳ್ಳಿ ಹಾಕಿದ್ದರು. ಹೀಗಿದ್ದೂ ಅವರ ಪ್ರಾಮಾಣಿಕತೆಗೆ ಇಂದು ಬೆಲೆ ದೊರಕಿದೆ. ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಹೆಸರುವಾಸಿಯಾಗಿರುವ ಅಂಗಾರ ಅವರು ಮೊಗೇರ ಸಮಾಜದ ‘ಹೆಮ್ಮೆ’ಯಾಗಿದ್ದಾರೆ ಎಂದು  ಪಿ.ಎಂ. ರವಿ ಹರ್ಷ ವ್ಯಕ್ತಪಡಿಸಿದರು.

ಮುಂಬರುವ ದಿನಗಳಲ್ಲಿ ನೂತನ ಸಚಿವ ಎಸ್. ಅಂಗಾರ ಹಾಗೂ ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೊಗೇರ ಸಮುದಾಯದ ಸದಸ್ಯರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆಂದು ತಿಳಿಸಿದ ಪಿ.ಎಂ. ರವಿ, ಕೊಡಗು ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆಯಲ್ಲಿ ಮೊಗೇರ ಸಮಾಜದ 32 ಮಂದಿ ಗೆಲುವನ್ನು ಪಡೆದಿದ್ದಾರೆ. ಈ ಬೆಳವಣಿಗೆ ಜಿಲ್ಲೆಯಲ್ಲಿ ಮೊಗೇರ ಸಮಾಜ ರಾಜಕೀಯವಾಗಿಯೂ ಮುಂದೆ ಬರುತ್ತಿರುವುದರ ಸಂಕೇತವಾಗಿದೆಯೆಂದು ಹರ್ಷ ವ್ಯಕ್ತಪಡಿಸಿದರು. ಕೊಡಗಿನ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಿದ್ದರೆ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗುತಿತ್ತೆಂದು ಪಿ.ಎಂ. ರವಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಸ್ಥಾಪಕಾಧ್ಯಕ್ಷ ಸದಾನಂದ ಮಾಸ್ಟರ್, ಜಿಲ್ಲಾ ಸಮಿತಿ ಸದಸ್ಯ ಪಿ.ಬಿ.ಮಂಜು, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಿ.ಬಿ.ಸುರೇಶ್ ಹಾಗೂ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಬಿ.ಎಂ.ದಾಮೋದರ್ ಉಪಸ್ಥಿತರಿದ್ದರು.


Search Coorg Media: Coorg's Largest Online Media Network