Header Ads Widget

Responsive Advertisement

ಸಂವಿಧಾನ ಆಶಯದಂತೆ ಪ್ರತಿಯೊಬ್ಬರೂ ನಡೆದುಕೊಳ್ಳಿ: ಬಿ.ಎಲ್.ಜಿನರಾಳಕರ್

ಸಂವಿಧಾನ ಆಶಯದಂತೆ ಪ್ರತಿಯೊಬ್ಬರೂ ನಡೆದುಕೊಳ್ಳಿ: ಬಿ.ಎಲ್.ಜಿನರಾಳಕರ್


ಮಡಿಕೇರಿ ನ.26: ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜೀವನ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಧೀಶರಾದ ಬಿ.ಎಲ್.ಜಿನರಾಳಕರ್ ಅವರು ತಿಳಿಸಿದ್ದಾರೆ.  

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ನ್ಯಾಯಾಲಯ ಆವರಣದಲ್ಲಿ  ಶುಕ್ರವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಭಾರತ ಸಂವಿಧಾನವು 4 ಆಧಾರ ಸ್ತಂಭಗಳನ್ನು ಒಳಗೊಂಡಿದೆ. ಸಂವಿಧಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಮನ್ನಣೆ ಇದೆ. ಆ ದಿಸೆಯಲ್ಲಿ ಸಂವಿಧಾನ ರಚಿಸಲು ಶ್ರಮಿಸಿದ ಎಲ್ಲರನ್ನೂ ಸ್ಮರಿಸಬೇಕು. ಅವರು ನಡೆದು ಬಂದ ಹಾದಿಯಲ್ಲಿ ಸಾಗುವುದರ ಜೊತೆಯಲ್ಲಿ ಸಂವಿಧಾನದ ಮೂಲ ಆಶಯವನ್ನು ಇಂದಿನ ಪೀಳಿಗೆ ಪಾಲಿಸಿ ಗೌರವಿಸಬೇಕು ಎಂದು ಅವರು ಹೇಳಿದರು.

ವಕೀಲರ ಸಂಘದ  ಅಧ್ಯಕ್ಷರಾದ  ಕೆ.ಡಿ.ದಯಾನಂದ ಅವರು ಮಾತನಾಡಿ ಭಾರತ ದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಪ್ರಜಾ ಪ್ರಭುತ್ವವನ್ನು ದೇಶಕ್ಕೆ ಕೊಟ್ಟಿದ್ದು ಸಂವಿಧಾನವಾಗಿದೆ. ಅಂತಹ ಸಂವಿಧಾನವನ್ನು ಮಂಡಿಸಿ ನಮಗೆ ನಾವೇ ಅರ್ಪಿಸಿಕೊಂಡ ದಿನ ನವೆಂಬರ್ 26 ಆಗಿದೆ ಎಂದು ಅವರು ಹೇಳಿದರು.

ಸಂವಿಧಾನವು ನಮ್ಮನ್ನು ರಕ್ಷಣೆ ಮಾಡುವಂತೆ, ಸಂವಿಧಾನದ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಸಂವಿಧಾನ ಗೌರವಿಸುವುದು ಮತ್ತು ಅದರ ಆಶಯಗಳನ್ನು ಪಾಲಿಸಬೇಕಿದೆ ಎಂದರು.

ಸಂವಿಧಾನದ ಮೂಲಕ ನಮಗೆ ದೊರೆಯುವ ಮೂಲಭೂತ ಹಕ್ಕುಗಳ ಬಗ್ಗೆ ಪ್ರಸ್ತಾಪಿಸುವ ಹಾಗೆಯೇ ಸಂವಿಧಾನದ ಮೂಲಭೂತ ಕರ್ತವ್ಯಗಳನ್ನು ಪಾಲಿಸಬೇಕು ಎಂದರು.

ಸಂವಿಧಾನದ ಮೂರು ಅಂಗಗಳಾದ ಶಾಸಕಾಂಗ ಕಾನೂನನ್ನು ರೂಪಿಸುತ್ತದೆ, ಕಾರ್ಯಾಂಗ ಆ ಕಾನೂನಿನ ಸಮರ್ಪಕ ನಿರ್ವಹಣೆಯಾಗಿದೆ ಮತ್ತು ನ್ಯಾಯಾಂಗ ಕಾನೂನಿನ ಪರಿಪಕ್ವತೆಯನ್ನು ನೋಡುವ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು. 

ಸಂವಿಧಾನದ ಪ್ರಸ್ತಾವನೆ ಭಾರತದ ಆತ್ಮವಿದ್ದಂತೆ ಸಂವಿಧಾನದ ಆಶಯದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಹಕ್ಕುಗಳು ಮತ್ತು ನ್ಯಾಯ ದೊರೆಯುವಂತೆ ಮಾಡುವುದು ವಕೀಲರಾದ ನಮ್ಮ ಕರ್ತವ್ಯವಾಗಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಸುಬ್ರಮಣ್ಯ ಅವರು ಮಾತನಾಡಿ ಪ್ರಜಾಸತ್ತಾತ್ಮಕ ಗಣರಾಜ್ಯ ಹೊಂದಲು, ಸಂವಿಧಾನದ ಮೂಲ ಆಶಯವನ್ನು ರಚಿಸಲು ಸಾಧಕ ಭಾದಕಗಳನ್ನು ಅರಿಯಲು ಸಂವಿಧಾನದ ಕರಡು ಸಮಿತಿಯ ರಚನೆಯ ಮೂಲಕ ಒಂದು ಸಂವಿಧಾನ ದೊರೆತಿದೆ. ಕರಡು ಸಮಿತಿಯ ಎಲ್ಲಾ ಸದಸ್ಯರು ವಕೀಲರಾಗಿದ್ದರು ಎಂದು ಅವರು ಸ್ಮರಿಸಿದರು.

ಸಂವಿಧಾನದ ಮೂಲ ಆಶಯ ಮತ್ತು ಕರ್ತವ್ಯಕ್ಕೆ ಭಾಜನರಾಗಿ ಸಂವಿಧಾನದ ಮೂಲಭೂತ ಹಕ್ಕುಗಳಿಂದ ವಂಚಿತರಾದ ಬಡ ಜನರು, ನಿರ್ಗತಿಕರು, ಶೋಷಣೆಗೆ ಒಳಪಟ್ಟವರು ಮುಂತಾದವರಿಗೆ ಉಚಿತ ಕಾನೂನು ಸೇವೆ ಮತ್ತು ಸಲಹೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸ್ಥಾಪನೆಯಾಯಿತು. ಪ್ರತಿಯೊಬ್ಬ ವಕೀಲರು ಒಮ್ಮತದಿಂದ ಕೈಜೋಡಿಸಿದಾಗ ಮಾತ್ರ ಅದರ ಸವಲತ್ತು ಜನರಿಗೆ ನೇರವಾಗಿ ತಲುಪಲು ಸಾದ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ರೂಪ ಕೆ., ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮನು ಬಿ.ಕೆ, ಅಪರ ಸಿವಿಲ್ ನ್ಯಾಯಾಧೀಶರಾದ ಸ್ಮಿತಾ ನಾಗಲಾಪುರ, ವಕೀಲರ ಸಂಘದ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಇತರರು ಇದ್ದರು. ರೋಹಿನಿ ಬಿ.ಕೆ ಸ್ವಾಗತಿಸಿ ನಿರೂಪಿಸಿ, ವಂದಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,