Header Ads Widget

Responsive Advertisement

ಮಡಿಕೇರಿಯ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭ

ಮಡಿಕೇರಿಯ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭ


ಮಡಿಕೇರಿ: ಸುಮಾರು 160 ವರ್ಷಗಳ ಇತಿಹಾಸ ಹೊಂದಿರುವ ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೇವಾಲಯ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರೆಯು ಏ.6 ರಿಂದ ರಿಂದ 9ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಏ.6 ರಂದು ದೇವಾಲಯದ ತಂತ್ರಿಗಳಾದ ಕೇರಳದ ಪಯ್ಯನ್ನೂರಿನ ಬ್ರಹ್ಮಶ್ರೀ ಕುನ್ನತ್ತಿಲ್ಲ ಮುರಳಿಕೃಷ್ಣನ್ ನಂಬೂದರಿ ತಂತ್ರಿಗಳ ನೇತೃತ್ವದಲ್ಲಿ ಸಂಜೆ 6.30 ರಿಂದ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಪೂಜೆ, ವಾಸ್ತು ಕಲಶಾಭಿಷೇಕ, ವಾಸ್ತು ಬಲಿ, ವಾಸ್ತು ಪುಣ್ಯಾಹ, ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಏ.7 ರಂದು ಬೆಳಿಗ್ಗೆ 7 ಗಂಟೆಯಿಂದ 108 ತೆಂಗಿನ ಕಾಯಿಗಳ ಮಹಾ ಗಣಪತಿ ಹೋಮ, ಶ್ರೀ ಅಯ್ಯಪ್ಪ, ಶ್ರೀ ಸುಬ್ರಹ್ಮಣ್ಯ, ಶ್ರೀ ಪಾರ್ವತಿ ದೇವಿಗೆ ಅಷ್ಠಾಭಿಷೇಕ, ಕಲಶಪೂಜೆ, ಕಲಶಾಭಿಷೇಕ, ಶ್ರೀ ನಾಗ ದೇವರಿಗೆ ತಂಬಿಲ ಸಮರ್ಪಣೆ ಮತ್ತು ಮಹಾಪೂಜೆಯೊಂದಿಗೆ ಅನ್ನಸಂತರ್ಪಣಾ ಕಾರ್ಯ ನೆರವೇರಲಿದೆ ಎಂದರು.

ಸಂಜೆ 4 ಗಂಟೆಗೆ ಕರ್ನಾಟಕ ವಿಧಾನ ಪರಿಷತ್ ಮಾಜಿ ಶಾಸಕ ಸುನಿಲ್ ಸುಬ್ರಮಣಿ, ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ಮಡಿಕೇರಿಯ ಹಿರಿಯ ವೈದ್ಯರಾದ ಡಾ.ಎಂ.ಜಿ. ಪಾಟ್ಕರ್ ಇವರ ಸಮ್ಮುಖದಲ್ಲಿ ಪರಿಶಿನಿಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್ ಶ್ರೀ ಬ್ಲಾತೂರ್ ಚಂದ್ರನ್ ಮಡೆಯಚ್ಚನ್ ಇವರು ಧ್ವಜಾರೋಹಣ ಮಾಡುವುದರ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಏ.8 ರಂದು ಸಂಜೆ 5 ಗಂಟೆಗೆ ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆಯು ಗಾಂಧಿ ಮೈದಾನದಿಂದ ಹೊರಡಲಿದ್ದು, ಮೆರವಣಿಗೆಯಲ್ಲಿ ಕಡಗದಾಳು, ನೀರುಕೊಲ್ಲಿ, ಸಂಪಿಗೆಕಟ್ಟೆ, ಕೆ.ಎಸ್.ಆರ್.ಟಿ.ಸಿ. ಡಿಪೋ ಮುಂಭಾಗ, ಕಾಲೇಜು ರಸ್ತೆಯ ಮೈತ್ತಿ ಜಂಕ್ಷನ್ ಹೀಗೆ ನಗರದ ನಾಲ್ಕು ದಿಕ್ಕುಗಳಿಂದ ಬರುವ ಶ್ರೀ ಮುತ್ತಪ್ಪ ದೇವರ ಕಲಶದೊಂದಿಗೆ ಮಹಿಳೆಯರು ಮತ್ತು ಮಕ್ಕಳ ತಾಲಾಪೆÇಲಿ ಮೆರವಣಿಗೆಯನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಿದ್ದಾರೆ.

ಅಲ್ಲದೆ ಮಂಗಳೂರಿನ ಆಕರ್ಷಕ ಚಂಡೆ ವಾದ್ಯ ಹಾಗೂ ಪಾಲಕ್ಕಾಡಿನ ಆಕರ್ಷಕ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಲಿದೆ ಎಂದರು.

ಇದೇ ದಿನ ದೇವಾಲಯದ ಆವರಣದಲ್ಲಿ ಸಂಜೆ 4 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, 4.30 ಗಂಟೆಗೆ ಶ್ರೀ ಶಾಸ್ತಪ್ಪ ದೇವರ ವೆಳ್ಳಾಟಂ, 5.30 ಗಂಟೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ರಾತ್ರಿ 7 ಗಂಟೆಗೆ ಶ್ರೀ ವಿಷ್ಣುಮೂರ್ತಿ ಮೇಲೇರಿಗೆ ಆಗ್ನಿ ಸ್ಪರ್ಶ, 8.30 ಗಂಟೆಗೆ ಶ್ರೀ ಪೋದಿ ವೆಳ್ಳಾಟಂ, 9.30 ಗಂಟೆಗೆ ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ ಜರುಗಲಿದ್ದು, 9.30 ರಿಂದ 1.30 ರವರೆಗೆ ‘ಮಂಗಳೂರಿನ ಸೌರಭ ಕಲಾ ಪರಿಷತ್ ಹಾಗೂ ಕೊಡಗಿನ ಪ್ರತಿಷ್ಠಿತ ನೃತ್ಯ ಕಲಾ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಉದ್ಘಾಟಿಸಲಿದ್ದಾರೆ.

ರಾತ್ರಿ 12 ಗಂಟೆಗೆ ಶ್ರೀ ಶಿವಭೂತ ತೆರೆ, 1 ಗಂಟೆಗೆ ಶ್ರೀ ಗುಳಿಗ ದೇವರ ತೆರೆ, 2.30 ಗಂಟೆಗೆ ಶ್ರೀ ಕುಟ್ಟಿಚಾತನ್ ದೇವರ ತೆರೆ, 3 ಗಂಟೆಗೆ ಕಳಗ ಪಾಟ್, ಸಂದ್ಯಾವೇಲೆ ನಡೆಯಲಿದೆ.

ಏ.9 ರಂದು ಬೆಳಿಗ್ಗೆ 4 ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ತೆರೆ, ಬೆಳಿಗ್ಗೆ 5 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಮೇಲೇರಿ, 8 ಗಂಟೆಗೆ ಶ್ರೀ ಪೊವ್ವದಿ ತೆರೆ, 9.30 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಬಾರಣೆ, ಮಧ್ಯಾಹ್ನ 11.30ಕ್ಕೆ ಧ್ವಜ ಅವರೋಹಣ ನೆರವೇರಲಿದೆ ಎಂದರು.

ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ನಡೆಯುವ ಈ ಸಾಂಪ್ರದಾಯಿಕ ಮೆರವಣಿಗೆಗೆ ಜಾತಿ ಭೇದವಿಲ್ಲದೆ ಪ್ರತಿ ಮನೆಯಿಂದಲೂ ಮಹಿಳೆಯರು ಮತ್ತು ಮಕ್ಕಳು ತಾಲಾಪೊಲಿ (ದೀಪ) ಮತ್ತು ಪೂರ್ಣಕುಂಭ ಕಲಶದೊಂದಿಗೆ ಶ್ರೀ ಮುತ್ತಪ್ಪ ದೇವರ ಉತ್ಸವ ಕಲಶವನ್ನು ನಗರಪ್ರದಕ್ಷಿಣೆ ಮಾಡುವುದರ ಮೂಲಕ ದೇವಾಲಯಕ್ಕೆ ಬರಮಾಡಿಕೊಂಡು ಎಲ್ಲಾ ದೇವತಾಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ವಿ. ಸುಬ್ರಮಣಿ, ಮಹಿಳಾ ವೇದಿಕೆ ಅಧ್ಯಕ್ಷರಾದ ಶಾರದಾ ರಾಮನ್, ತೆಯ್ಯಂ ಸಮಿತಿ ಸಂಚಾಲಕ ಕೆ.ಎಸ್. ರಮೇಶ್, ಮೆರವಣಿಗೆ ಸಮಿತಿ ಸಂಚಾಲಕ ಅಂಬೆಕಲ್ ನವೀನ್ ಕುಶಾಲಪ್ಪ ಹಾಗೂ ಸ್ವಾಗತ ಸಮಿತಿ ಸಹ ಸಂಚಾಲಕಿ ರಾಣಿ ನೀಲಮ್ಮ ಉಪಸ್ಥಿತರಿದ್ದರು.