Header Ads Widget

Responsive Advertisement

ಕೊಡವ ಅಭಿವೃದ್ಧಿ ನಿಗಮವನ್ನು ಅಧಿಕೃತವಾಗಿ ಘೋಷಣೆ ಮಾಡಿದ ಕರ್ನಾಟಕ ಸರ್ಕಾರಕ್ಕೆ ಕೊಡವರ ಮಾತೃ ಸಂಸ್ಥೆ ಅಖಿಲ ಕೊಡವ ಸಮಾಜದಿಂದ ಮೆಚ್ಚುಗೆ

ಕೊಡವ ಅಭಿವೃದ್ಧಿ ನಿಗಮವನ್ನು ಅಧಿಕೃತವಾಗಿ ಘೋಷಣೆ ಮಾಡಿದ ಕರ್ನಾಟಕ ಸರ್ಕಾರಕ್ಕೆ ಕೊಡವರ ಮಾತೃ ಸಂಸ್ಥೆ ಅಖಿಲ ಕೊಡವ ಸಮಾಜದಿಂದ ಮೆಚ್ಚುಗೆ

ಇತ್ತೀಚೆಗೆ ನಾಪೊಕ್ಲುವಿನಲ್ಲಿ ನಡೆದ ಅಪ್ಪಚೆಟ್ಟೊಳಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆಯಂತೆ  ಕೊಡವ ಅಭಿವೃದ್ಧಿ ನಿಗಮವನ್ನು ಅಧಿಕೃತವಾಗಿ ಘೋಷಿಸುವ ಮೂಲಕ ಸರಕಾರ ನುಡಿದಂತೆ ನಡೆದಿದೆ, ಮುಖ್ಯಮಂತ್ರಿಗಳಿಗೆ, ಶಾಸಕರುಗಳಿಗೆ ಹಾಗೂ ಸರ್ಕಾರಕ್ಕೆ ಕೊಡವ ಜನಾಂಗದ ಪರವಾಗಿ ಧನ್ಯವಾದಗಳು ಎಂದು ಕೊಡವ ಜನಾಂಗದ ಮಾತೃ ಸಂಸ್ಥೆಯಾಗಿರುವ ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗಸಂಸ್ಥೆಗಳು ಹರ್ಷ ವ್ಯಕ್ತಪಡಿಸಿದೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾಹಿತಿ ನೀಡುತ್ತಾ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿರುವ ಅವರು ಇದರ ಯಶಸ್ಸಿನ ಹಿಂದೆ ಹಗಲಿರುಳು ಶ್ರಮಿಸಿರುವ ಯುಕೊ ಸಂಸ್ಥೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹಾಗೂ ಬಳಗದವರ ಶ್ರಮ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಜನಾಂಗದ ಪರವಾಗಿ ಧನ್ಯವಾದ ಅರ್ಪಿಸಿದ್ದಾರೆ. ಕೊಡವ ಜನಾಂಗ ಎನ್ನುವುದು ಒಂದು ವಿಭಿನ್ನ ಹಾಗೂ ವಿಶೇಷ ಜನಾಂಗವಾಗಿದ್ದು, ಇಂದು ಜನಸಂಖ್ಯೆಯ ಆಧಾರವನ್ನು ಹಾಗೂ ಆರ್ಥಿಕವಾಗಿ ತೆಗೆದುಕೊಂಡರೆ ಕೊಡವ ಜನಾಂಗ ಅಳಿವಿನಂಚಿನಲ್ಲಿರುವ ಜನಾಂಗವಾಗಿದೆ ಎಂದರೆ ತಪ್ಪಲ್ಲ. ಈ ದೇಶಕ್ಕೆ ಒಬ್ಬರು ಸೇನಾ ಮಹಾದಂಡನಾಯಕ ಫೀ.ಮಾ ಕಾರ್ಯಪ್ಪ ಹಾಗೂ ಮತ್ತೊಬ್ಬರು ಜನರಲ್ ತಿಮ್ಮಯ್ಯನವರನ್ನು ಸೇರಿದಂತೆ ಲೆಕ್ಕವಿಲ್ಲದಷ್ಟು ಸೇನಾಧಿಕಾರಿಗಳು ಹಾಗೂ ಅಸಂಖ್ಯಾತ ವೀರ ಸೈನಿಕರು ಕೊಡಗುಗೆಯಾಗಿ ನೀಡಿರುವ ಹೆಗ್ಗಳಿಕೆ ಕೊಡವ ಜನಾಂಗಕ್ಕೆ ಇದೆ. ಇದೀಗ ತಡವಾಗಿ ಆದರೂ ಕೊಡವ ಅಭಿವೃದ್ಧಿ ನಿಗಮ ಘೋಷಣೆ ಮಾಡುವ ಮೂಲಕ ಅಳಿವಿನಂಚಿನಲ್ಲಿರುವ ಕೊಡವ ಜನಾಂಗದ ರಕ್ಷಣೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಕೊಡವ ಅಭಿವೃದ್ಧಿ ನಿಗಮದ ಮೂಲಕ ಕೊಡವ ಜನಾಂಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಕೊಡವರ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರ ಒತ್ತು ನೀಡಬೇಕಿದೆ. ಇದರ ಜೊತೆ ಜೊತೆಗೆ ಕೊಡಗರು ಎಂದಿರುವ ಸರಕಾರದ ಎಲ್ಲಾ ದಾಖಲೆಗಳನ್ನು ತಿದ್ದುಪಡಿ ಮಾಡಿ "ಕೊಡವರು" ಎಂಬ ಆದೇಶವನ್ನು ಹೊರಡಿಸಬೇಕಿದೆ. ಕೊಡಗರು ಎಂಬ ಜನಾಂಗವೇ ಅಸ್ತಿತ್ವದಲ್ಲಿಲ್ಲ ಎಂಬ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳು ತಿಳಿದುಕೊಳ್ಳಬೇಕಿದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಯೂತ್ ವಿಂಗ್ ಒತ್ತಾಯಿಸಿದೆ.