ಕೊರೊನಾ ಭೀಕರತೆಯ ಸಮಯದಲ್ಲಿ ಕೆಲವು ಆಸ್ಪತ್ರೆ ಸಿಬ್ಬಂದಿ ಮಾನವೀಯತೆ ಮರೆತರಾ?
ಕೊವಿಡ್ ಸೋಂಕಿತರು ವೆಂಟಿಲೇಟರ್ನಲ್ಲಿ ಸಾವು-ಬದುಕಿನ ನಡುವೆ ನರಳಾಡುವಂತ ಪರಿಸ್ಥಿತಿ. ಆಸ್ಪತ್ರೆ ಸಿಬ್ಬಂದಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ಕೊವಿಡ್ ಸೋಂಕಿತ ಕುಟುಂಬಸ್ಥರ ಆರೋಪ. ಮಹಾಮಾರಿಯಿಂದ ಅನೇಕ ಸಮಸ್ಯೆಗಳು, ಸಾವು-ನೋವುಗಳು ಸಂಭವಿಸುತ್ತಿವೆ. ಮಾಧ್ಯಮಗಳ ಎದುರು ಸೋಂಕಿತ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಈ ಹಿಂದೆ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಸರಿಯಿಲ್ಲವೆಂದು ವಿಡಿಯೊ ಒಂದು ವೈರಲ್ ಆಗಿತ್ತು, ಇದರಿಂದ ಜಿಲ್ಲೆಯ ಜನರಿಗೆ ಸಾಕಷ್ಟು ಭಯ, ಆತಂಕವಾಗಿತ್ತು. ಮಡಿಕೇರಿಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಸಾಕಷ್ಟು ಬೆಡ್ ಗಳಿಲ್ಲ, ನಾಲ್ಕು ಮಂದಿ ರೋಗಿಗಳು ಒಂದೇ ಬೆಡ್ ನಲ್ಲಿರಬೇಕಾದ ಪರಿಸ್ಥಿತಿಯಿದೆ ಎಂದೆಲ್ಲಾ ಸುದ್ದಿ ಬಂದಿತ್ತು. ಆದರೆ ಇದೆಲ್ಲಾ ಸುಳ್ಳುಸುದ್ದಿ ಎಂದು ಆಸ್ಪತ್ರೆಯ ವೈದ್ಯರು ಸ್ಪಷ್ಟನೆ ನೀಡಿದ್ದರು.
ಆದರೆ ಕೊರೊನಾ ನಡುವೆ ಸುಲಿಗೆಗೆ ಮುಂದಾಗಿರುವ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿನ ಕೆಲವು ಸಿಬ್ಬಂದಿಗಳು ಹಗಲು ದರೋಡೆಗೆ ಇಳಿದಿದ್ದಾರೆ ಎಂಬುದು, ಮೇ 19ರ ವಿಜಯವಾಣಿ ಪತ್ರಿಕೆಯಲ್ಲಿ ಕೋವಿಡ್ ಆಸ್ಪತ್ರೆಯ ವೈದ್ಯಾಧಿಕಾರಿಯ ಕರ್ಮಕಾಂಡವನ್ನು ಸಾಕ್ಷಿ ಸಮೇತ ಬಯಲಿಗೆಳೆದಿದ್ದು ಸಾಬಿತಾಯಿತು. ದೇಶವೇ ಕೋರೊನ ಸಂಕಷ್ಟದಿಂದ ತತ್ತರಿಸಿ, ಬದುಕುವ ಆಸೆಯೇ ಬತ್ತಿಹೋಗಿ ವೈದ್ಯರನ್ನು ದೇವರಾಗಿ ಕಾಣುತ್ತಿರುವ ಈ ಸಂದರ್ಭದಲ್ಲಿ ʼಬೇಲಿಯೇ ಎದ್ದು ಹೊಲವ ಮೇಯ್ದಂತೆʼ ಆಗಿದೆ ದನದಾಹಿ ವೈದ್ಯನ ಕರ್ಮಕಾಂಡ.
ಅದರೊಂದಿಗೆ ಹಣ ಕೊಟ್ಟರಷ್ಟೇ ವಾರ್ಡ್ ಬಾಯ್ಗಳು ಕೆಲಸ ಮಾಡ್ತಾರಂತೆ. ಜೊತೆಗೆ, ಶವವನ್ನ ಆಂಬುಲೆನ್ಸ್ಗೆ ಶಿಫ್ಟ್ ಮಾಡಲು ಸಹ ಲಂಚಕ್ಕೆ ಡಿಮ್ಯಾಂಡ್ ಇಡುತ್ತಾರಂತೆ. ನಾನ್ ಕೊವಿಡ್ ಮೃತದೇಹವನ್ನ ಸಾಗಿಸಲೂ ಸಹ ಮಾಮೂಲಿ ಪಡೆಯುತ್ತಿದ್ದಾರಂತೆ. ಒಂದು ವೇಳೆ ದುಡ್ಡು ಕೊಡಲ್ಲಿಲ್ಲಾ ಅಂದ್ರೆ ಅಂಬ್ಯೂಲೆನ್ಸ್ಗೆ ಬಾಡಿ ಶಿಫ್ಟ್ ಆಗಲ್ಲ. ಸ್ಟ್ರೆಕ್ಚರ್ ಮುಟ್ಟಿದ್ರೆ ಇವ್ರಿಗೆ ಕಾಸು ಕೊಡಲೇಬೇಕು. ಅದು ಏನಿಲ್ಲಾ ಅಂದ್ರು ಮಿನಿಮಮ್ ಸಾವಿರ ಅಥವಾ ಎರಡು ಸಾವಿರ ರೂಪಾಯಿ. ಐನೂರು ಸಾವಿರ ಕೊಟ್ರೆ ಕಿಸೆಗೆ ಹಾಕೊಂಡು ಬೈಕೊಂಡು ಹೋಗ್ತಾರಂತೆ ಎಂದು ಮೃತ ರೋಗಿಗಳ ಸಂಬಂಧಿಕರು ಅಳಲು ತೋಡಿಕೊಂಡಿದ್ದು ಉಂಟು. ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಇಂಥ ಲಂಚಾವತಾರ ಜೋರಾಗಿ ನಡೆಯುತ್ತಿದೆ ಪರದೆಯ ಹಿಂದೆ ಎಂದು ನೋಂದ ಜನರ ನುಡಿಗಳು.
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಎಷ್ಟು ಮುಖ್ಯವೋ ಆತ್ಮ ಸ್ಥೈರ್ಯವೂ ಅಷ್ಟೇ ಮುಖ್ಯ. ಹೀಗಾಗಿ ರೋಗಿಗಳ ಭಯ, ಆತಂಕ ದೂರ ಮಾಡೊ ನಿಟ್ಟಿನಲ್ಲಿ ಆಸ್ಪತ್ರೆಯ ಪ್ರತಿಯೋರ್ವ ಸಿಬ್ಬಂದಿಗಳು ರೋಗಿಗಳ ಬೆಂಬಲಕ್ಕೆ ನಿಲ್ಲಬೇಕಾಗಿದೆ. ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಿಬ್ಬಂದಿಗಳ ಕೊರತೆಯಿದೆ. ಆಸ್ಪತ್ರೆಯಲ್ಲಿ ಮತ್ತಷ್ಟು ಸಿಬ್ಬಂದಿಗಳ ಅಗತ್ಯವಿದೆ. ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆದರೂ ಮಾನವೀಯತೆಯನ್ನು ಮರೆತು ಸೇವೆ ಸಲ್ಲಿಸುವಂತಾಗಬಾರದು.
ಈ ಹಿಂದೆ ವಿಶ್ವವನ್ನು ತಲ್ಲಣಗೊಳಿಸಿರುವ ಕೋವಿಡ್-19 ವಿರುದ್ದ ವೈದ್ಯರು ತಮ್ಮ ಜೀವದ ಹಂಗು ತೊರೆದು ಚಿಕಿತ್ಸೆ ನೀಡಿರುವುದನ್ನು ಪರಿಗಣಿಸಿ, ಇಂತಹ ಕೊರೊನಾ ವಾರಿಯರ್ಸಗಳಿಗೆ ಸನ್ಮಾನಿಸಿ ಗೌರವ ಸಲ್ಲಿಸುವ ಮೂಲಕ ವೈದ್ಯರಿಗೆ, ನರ್ಸಿಂಗ್ ಅಧಿಕಾರಿಗಳು(ನರ್ಸ್ಗಳು) ಮತ್ತು ವೈದಕೀಯ ಸಿಬ್ಬಂದಿಗಳಿಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ್ದು ಉಂಟು.
ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಹೀಗೆ ಸಾವಿರಾರು ಜನರು ಕೊರೊನಾ ಸೋಂಕಿಗೆ ತುತ್ತಾಗಿ ಸಾವಿನ ದವಡೆಯಿಂದ ಎದ್ದು ಬರುತ್ತಿರುವುದಕ್ಕೆ ಅದೆಷ್ಟೋ ವೈದ್ಯರು, ನರ್ಸಿಂಗ್ ಅಧಿಕಾರಿಗಳು(ನರ್ಸ್ಗಳು) ಮತ್ತು ವೈದಕೀಯ ಸಿಬ್ಬಂದಿಗಳು ಸಲ್ಲಿಸುತ್ತಿರುವ ಸೇವೆಯೇ ಕಾರಣ. ಹೀಗೆ ತಮ್ಮ ಜೀವದ ಹಂಗನ್ನು ತೊರೆದು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ, ನರ್ಸಿಂಗ್ ಅಧಿಕಾರಿಗಳು(ನರ್ಸ್ಗಳು) ಮತ್ತು ವೈದಕೀಯ ಸಿಬ್ಬಂದಿಗಳೂ, ಕೋವಿಡ್ ಸಂದರ್ಭದಲ್ಲಿ ಜನರ ಜೀವವನ್ನು ಉಳಿಸಬೇಕು ಎಂಬ ಉದಾತ್ತ ಧ್ಯೇಯದೊಂದಿಗೆ ಕಾರ್ಯನಿರ್ವಹಿಸಿದ ಎಲ್ಲ ಕೊರೊನಾ ವಾರಿಯರ್ಗಳ ಸೇವೆ ಅನುಕರಣೀಯ ಮತ್ತು ಶ್ಲಾಘನೀಯವೇ. ಆಗಿದ್ದರೂ ಕೊರೊನಾ ಭೀಕರತೆಯ ಈ ಸಮಯದಲ್ಲಿ ಕೆಲವು ಆಸ್ಪತ್ರೆ ಸಿಬ್ಬಂದಿ ಮಾನವೀಯತೆ ಮರೆತರಾ? ಎಂಬುದು ಜನಮಾನಸದಲ್ಲಿ ಪ್ರಶ್ನೆಯಾಗಿ ಕಾಡುತ್ತಿದೆ.
✍️.... ಅರುಣ್ ಕೂರ್ಗ್
(ಪತ್ರಕರ್ತರು)
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ ,
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network