Header Ads Widget

Responsive Advertisement

ಕೊಡವ ಜನಾಂಗ ಅಭಿವೃದ್ದಿ ನಿಗಮ ಸ್ಥಾಪನೆ ಹೋರಾಟಕ್ಕೆ ಅಖಿಲ ಕೊಡವ ಸಮಾಜ ಬೆಂಬಲ

ಕೊಡವ ಜನಾಂಗ ಅಭಿವೃದ್ದಿ ನಿಗಮ ಸ್ಥಾಪನೆ ಹೋರಾಟಕ್ಕೆ ಅಖಿಲ ಕೊಡವ ಸಮಾಜ ಬೆಂಬಲ


ಒಬ್ಬರು ಫೀಲ್ಡ್ ಮಾರ್ಷಲ್, ಮತ್ತೊಬ್ಬರು ಜನರಲ್ ಸೇರಿದಂತೆ ಈ ದೇಶದ ಭದ್ರತೆಗೆ ಅಪಾರ ಕೊಡುಗೆಯನ್ನು ನೀಡಿರುವ ಹಾಗೂ ಯಾವುದೇ ಮೀಸಲಾತಿಯ ಲಾಭವಿಲ್ಲದೆ ಕೇವಲ ಸ್ವಪ್ರಯತ್ನದಿಂದ ಕ್ರೀಢಾಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಚಾಪನ್ನು ಮೂಡಿಸಿ ಅಳಿವಿನಂಚಿನಲ್ಲಿರುವ ಕೊಡವ ಜನಾಂಗದ ಶ್ರೇಯೋಭಿವೃದ್ದಿಗಾಗಿ  ಸರಕಾರ ಪ್ರತ್ಯೇಕ "ಕೊಡವ ಜನಾಂಗ ಅಭಿವೃದ್ದಿ ನಿಗಮ" ಸ್ಥಾಪಿಸಬೇಕು ಎಂಬ ಯುನೈಟೆಡ್ ಕೊಡವ ಆರ್ಗನೈಸೇಷನ್- (ಯುಕೊ) ಒತ್ತಾಯಕ್ಕೆ ಅಖಿಲ ಕೊಡವ ಸಮಾಜ ಬೆಂಬಲ ಸೂಚಿಸಿದೆ. 

ಇತ್ತೀಚೆಗೆ ವಿರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಹಲವಾರು ವಿಚಾರಗಳು ಚರ್ಚೆಗೆ ಬಂದು, ಯುಕೊ ಸಂಸ್ಥೆ ಹಮ್ಮಿಕೊಂಡಿರುವ "ಕೊಡವ ಜನಾಂಗ ಅಭಿವೃದ್ದಿ ನಿಗಮ" ಹೋರಾಟಕ್ಕೆ ಬೆಂಬಲ ಸೂಚಿಸಲು ನಿರ್ಣಯ ಕೈಗೊಳ್ಳಲಾಯಿತು. ಈ ಕುರಿತು ಸಭೆಗೆ ಮಾಹಿತಿ ನೀಡಿದ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ನಾವು ಸರಕಾರಕ್ಕೆ ಪ್ರತ್ಯೇಕವಾಗಿ ಮನವಿ ಸಲ್ಲಿಸುವ ಬದಲು ಈಗಾಗಲೇ ಹೋರಾಟ ಹಮ್ಮಿಕೊಂಡಿರುವ ಯುಕೊ ಸಂಚಾಲಕ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ ಹಾಗೂ ತಂಡಕ್ಕೆ ಬೆಂಬಲ ಸೂಚಿಸುವ ಬಗ್ಗೆ ಸಭೆಗೆ ಮಾಹಿತಿ ನೀಡಿದ್ದರು. ಇದಕ್ಕೆ ಸಭೆ ಸಂಪೂರ್ಣ ಬೆಂಬಲ ಸೂಚಿಸಿ, ರಾಜ್ಯ ಸರಕಾರ  ಇತ್ತೀಚೆಗೆ ನೂತನವಾಗಿ ವೀರಶೈವ ಲಿಂಗಾಯಿತ, ಒಕ್ಕಲಿಗ ಹಾಗೂ ಮರಾಠ ಸಮುದಾಯಗಳಿಗೆ ನೀಡಿರುವಂತೆ ಕೊಡವ ಜನಾಂಗದ ಶ್ರೇಯೋಭಿವೃದ್ದಿಗಾಗಿ ಪ್ರತ್ಯೇಕ "ಕೊಡವ ಜನಾಂಗ ಅಭಿವೃದ್ದಿ ನಿಗಮ" ಸ್ಥಾಪಿಸಬೇಕು ಎಂದು ಒತ್ತಾಯಿಸಿತು. ಕೊಡವರಿಗೆ ಮೇಲ್ನೋಟಕ್ಕೆ ಸದೃಢರಾಗಿ ಕಾಣುವ ಕೊಡವ ಜನಾಂಗದಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಿಗೆ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪಿಸುವ ಅನಿವಾರ್ಯತೆ ಇದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ, ವೀರಶೈವ ಲಿಂಗಾಯಿತ, ಒಕ್ಕಲಿಗ ಹಾಗು ಮರಾಠ ಸಮುದಾಯಗಳಿಗೆ ನೂತನವಾಗಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವುದರ ಮೂಲಕ ರಾಜ್ಯದಲ್ಲಿ  ಬಹುಸಂಖ್ಯಾತರು,  ಹಾಗೂ ರಾಜಕೀಯವಾಗಿ  ಪ್ರಬಲರಾಗಿರುವ  ಜನಾಂಗಗಳಲ್ಲಿಯೂ ಸಾಮಾಜಿಕ,  ಶೈಕ್ಷಣಿಕ ಹಾಗು ಆರ್ಥಿಕವಾಗಿ ಹಿಂದುಳಿದವರು ಇರುವುದನ್ನು  ಗುರುತಿಸಿ, ಈ ಜನಾಂಗದಲ್ಲಿರುವ ಹಿಂದುಳಿದವರ ಏಳಿಗೆಗಾಗಿ ಸರಕಾರವು ಸ್ಪಂದಿಸುವ ಚಿಂತನೆಯೊಂದಿಗೆ ಅಂತಹ  ಸಮುದಾಯಗಳಿಗೆ  ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು  ಸ್ಥಾಪಿಸಿದ್ದರು. ಹಾಗೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 3ಎ ಅಡಿಯಲ್ಲಿ ವರ್ಗೀಕರಣಗೊಂಡಿರುವ ಒಕ್ಕಲಿಗರಿಗೂ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪನೆಯಾಗಿರುವಾಗ, ಅತ್ಯಂತ ಸೂಕ್ಷ್ಮ ಅಲ್ಪಸಂಖ್ಯಾತರಾಗಿರುವ ಕೊಡವ ಜನಾಂಗವೂ ಸಹ ಅಭಿವೃದ್ದಿ ನಿಗಮ ಹೊಂದಲು ಎಲ್ಲಾ ವಿಧದಲ್ಲಿ ಅರ್ಹತೆಯನ್ನು ಹೊಂದಿದೆ ಹಾಗೂ ಕೊಡವ ಜನಾಂಗ ಕೂಡ ಆರ್ಥಿಕವಾಗಿ ಹಿಂದುಳಿದಿದೆ. ಆದ್ದರಿಂದ ಸರಕಾರ ಕೊಡವರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ "ಕೊಡವ ಜನಾಂಗ ಅಭಿವೃದ್ದಿ ನಿಗಮ" ಸ್ಥಾಪಿಸಬೇಕು ಎಂದು ಅಖಿಲ ಕೊಡವ ಸಮಾಜ ಒಕ್ಕೊರಳಿನ ನಿರ್ಣಯ ಕೈಗೊಂಡಿತು.

ಹಾಗೇ ಕೊಡವರ ಕೋವಿ ಹಕ್ಕಿನ ವಿಚಾರವಾಗಿ ಗೆಲುವಿಗೆ ಸಹಕಾರಿಯಾದ ಎಲ್ಲಾ ವಕೀಲರಿಗೆ ಸಭೆ ಅಭಿನಂದನೆ ಸಲ್ಲಿಸಿತು ಮಾತ್ರವಲ್ಲ ಸದ್ಯದಲ್ಲಿಯೇ ಎಲ್ಲಾ ವಕೀಲರನ್ನು ಕರೆದು ಸನ್ಮಾನಿಸುವ ತಿರ್ಮಾನ ಕೈಗೊಳ್ಳಲಾಯಿತು. ಹಾಗೇ ಅಖಿಲ ಕೊಡವ ಸಮಾಜ ಮಹಾಸಭೆಯನ್ನು ಡಿಸೆಂಬರ್ ತಿಂಗಳಲ್ಲಿ ನಡೆಸುವಂತೆ ಸಭೆ ತಿರ್ಮಾನಿಸಿತು. ಸಭೆಯಲ್ಲಿ ಅಖಿಲ ಕೊಡವ ಸಮಾಜದ ಅಂಗಸಂಸ್ಥೆಯಾಗಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸ್ಥಾಪನೆಯಾಗಿ ಒಂದು ವರ್ಷ ತುಂಬುತ್ತಿರುವ ನಿಟ್ಟಿನಲ್ಲಿ ಯೂತ್ ವಿಂಗ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಕೇವಲ ಒಂದು ವರ್ಷದಲ್ಲಿ ಸಾಧನೆ ಬಹಳಷ್ಟಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದರು. ಮಾತಂಡ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಅಜ್ಜಿಕುಟ್ಟೀರ ಎನ್ ಮಾದಯ್ಯ, ಪ್ರಧಾನ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಚೊಟ್ಟೇಕ್'ಮಾಡ ರಾಜೀವ್ ಬೋಪಯ್ಯ,  ವಿರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ವಾಂಚೀರ ನಾಣಯ್ಯ, ಅಖಿಲ ಕೊಡವ ಸಮಾಜ ಸದಸ್ಯರಾದ ನಂದೇಟೀರ ರಾಜ ಮಾದಪ್ಪ, ಪರದಂಡ ವಿಠಲ್ ಭೀಮಯ್ಯ, ಅಜ್ಜಿಕುಟ್ಟೀರ ದೇವಯ್ಯ, ಕಾಳಿಮಾಡ ಮೋಟಯ್ಯ, ಐನಂಡ ಸಿ ಗಣಪತಿ, ಕೋಲತಂಡ ಸುಬ್ರಮಣಿ,  ಬಿ.ಎ ಉತ್ತಯ್ಯ, ಅಪ್ಪಂಡೇರಂಡ ಜೋಯಪ್ಪ, ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಕಾಣತಂಡ ವಿವೇಕ್ ಅಯ್ಯಪ್ಪ, ಅಣ್ಣೀರ ಹರೀಶ್ ಮಾದಪ್ಪ, ಮೊದಲಾದವರು ಉಪಸ್ಥಿತರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,