Header Ads Widget

Responsive Advertisement

ಮತದಾರರ ಸಾಕ್ಷರತಾ ಸಂಘಗಳ ಹಾಗೂ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಯ ಬಗ್ಗೆ ನಡೆದ ಸಮಾಲೋಚನಾ ಸಭೆ

ಮತದಾರರ ಸಾಕ್ಷರತಾ ಸಂಘಗಳ ಹಾಗೂ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಯ ಬಗ್ಗೆ  ನಡೆದ ಸಮಾಲೋಚನಾ ಸಭೆ


ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ; ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಿ: ವಸ್ತ್ರದ್ 

ಮಡಿಕೇರಿ: ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ(ಸ್ವೀಪ್) ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಸ್ವೀಪ್ ರಾಜ್ಯ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರು ತಿಳಿಸಿದ್ದಾರೆ.  

ಸ್ವೀಪ್ ಕಾರ್ಯಚಟುವಟಿಕೆಗಳು, ಮತದಾರರ ಸಾಕ್ಷರತಾ ಸಂಘಗಳ ಹಾಗೂ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಯ ಬಗ್ಗೆ ನಗರದ ಜಿ.ಪಂ.ಸಿಇಒ ಅವರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು. 

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮತದಾನ ಹೆಚ್ಚಳಕ್ಕೆ ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ಮತದಾನದ ಮಹತ್ವ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಬೇಕು ಎಂದು ಪಿ.ಎಸ್.ವಸ್ತ್ರದ್ ಅವರು ಸಲಹೆ ಮಾಡಿದರು.  

18 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದು, ಮತದಾರರ ಗುರುತಿನ ಚೀಟಿ ತಲುಪಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಮತ್ತಿತರ ಕಾರ್ಯವನ್ನು ಕೈಗೊಳ್ಳುವಂತೆ ಸ್ವೀಪ್ ರಾಜ್ಯ ನೋಡಲ್ ಅಧಿಕಾರಿ ಅವರು ತಿಳಿಸಿದರು. 

ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ತಲುಪುವ ನಿಟ್ಟಿನಲ್ಲಿ ಮಾಹಿತಿ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಪೋಸ್ಟರ್ ಅಳವಡಿಸುವುದು, ಮತದಾನದ ಮಹತ್ವ ಕುರಿತು ಘೋಷವಾಕ್ಯದ ಮೂಲಕ ಮಾಹಿತಿ ನೀಡುವುದು, ಸಂವಾದ ಕಾರ್ಯಕ್ರಮ ಏರ್ಪಡಿಸುವಂತೆ ಅವರು ಹೇಳಿದರು. 

ವಿವಿ ಪ್ಯಾಟ್ ಮತ್ತು ಇವಿಎಂ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಮತದಾನದ ದಿನದಂದು ಮತದಾನದ ಸಮಯ ಮತ್ತಿತರ ಬಗ್ಗೆ ವಿದ್ಯುತ್ ಬಿಲ್ಲು, ಹಾಲಿನ ಪ್ಯಾಕೇಟ್, ಬಸ್ ಚೀಟಿಗಳಲ್ಲಿ ಮಾಹಿತಿ ನೀಡುವುದು. ಕ್ರೀಡೆ, ಸಾಹಿತ್ಯ, ಸಿನಿಮಾ ಹೀಗೆ ಹಲವು ಕ್ಷೇತ್ರದ ಸಾಧಕರಿಂದ ಚುನಾವಣಾ ಮಹತ್ವದ ಬಗ್ಗೆ ಮಾಹಿತಿ ನೀಡುವುದು. ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನ ಹೆಚ್ಚಳಕ್ಕೆ ಜಾಗೃತಿ ಮೂಡಿಸುವಂತೆ ಸ್ವೀಪ್ ರಾಜ್ಯ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರು ತಿಳಿಸಿದರು. 

      ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಮತದಾನದ ಮಹತ್ವ ಬಗ್ಗೆ ಹೆಚ್ಚಿನ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಹಾಡುಗಳ ಮೂಲಕ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವಂತೆ ಅವರು ಸಲಹೆ ಮಾಡಿದರು. 

      ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಮತದಾನದ ಮಹತ್ವ ಕುರಿತು ಗ್ರಾ.ಪಂ.ಮಟ್ಟದಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 

      ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳಲ್ಲಿ ಡಿಜಿಟಲ್ ಗ್ರಂಥಾಲಯ ಅಳವಡಿಸಲಾಗಿದ್ದು, ಎಲ್ಲಾ ಗ್ರಾ.ಪಂ.ಗಳಲ್ಲಿ ಬ್ರಾಡ್ ಬ್ಯಾಂಡ್ ಸೌಲಭ್ಯವಿದ್ದು, ಆ ನಿಟ್ಟಿನಲ್ಲಿ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಮೂಲಕ ಹಲವು ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

      ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್ ಅವರು ಮಾಹಿತಿ ನೀಡಿ ಚುನಾವಣಾ ಸಾಕ್ಷರತೆ ಅರಿವು ಮೂಡಿಸುವುದು, ಪ್ರಜಾಪ್ರಭುತ್ವ ಪರಿಕಲ್ಪನೆ ಮೂಡಿಸುವ ಪಠ್ಯೇತರ ಚಟುವಟಿಕೆ ಹಮ್ಮಿಕೊಳ್ಳುವುದು, ಭಾವಿ ಮತದಾರರದಲ್ಲಿ ಮತದಾನದ ಪ್ರಕ್ರಿಯೆಯ ಅರಿವು ಮೂಡಿಸುವುದು, ಚುನಾವಣಾ ಪ್ರಕ್ರಿಯೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ, ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್ ಹಾಗೂ ಮತದಾನದ ಪಾವಿತ್ರ್ಯತೆ ಬಗ್ಗೆ ಅರಿವು, 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವುದು, ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

      ಮತದಾರರ ಸಾಕ್ಷರತಾ ಕ್ಲಬ್ ಮೂಲಕ ಶಾಲಾ ವಿದ್ಯಾರ್ಥಿ ಸಂಘ ರಚನೆ, ಚಿತ್ರಕಲೆ, ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ, ಅಣಕು ಸಂಸತ್ ಏರ್ಪಡಿಸಲಾಗಿದೆ ಎಂದು ವೆಂಕಟೇಶ್ ಮಾಹಿತಿ ನೀಡಿದರು.  

      ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪುಟ್ಟರಾಜು, ಡಯಟ್ ಉಪನ್ಯಾಸಕರಾದ ಗಾಯತ್ರಿ, ಬಿಆರ್‍ಸಿ. ವನಜಾಕ್ಷಿ, ಶಶಿಧರ, ಶಿಕ್ಷಣ ಸಂಯೋಜಕರಾದ ಮಾರುತಿ, ಸ್ವೀಪ್ ಜಿ.ಪಂ. ವಿಭಾಗದ ವ್ಯವಸ್ಥಾಪಕರಾದ ನವೀನ್, ಚುನಾವಣಾ ಶಿರಸ್ತೆದಾರ್ ಪ್ರಕಾಶ್, ಅನಿಲ್ ಕುಮಾರ್ ಇತರರು ಹಲವು ಮಾಹಿತಿ ನೀಡಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,