Header Ads Widget

Responsive Advertisement

ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ನೂರು ವರ್ಷ ಪೂರೈಸಿ 101ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸವಿ ನೆನಪಿಗಾಗಿ ಶತಮಾನೋತ್ಸವ ಭವನ ನಿರ್ಮಾಣ


ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ನೂರು ವರ್ಷ ಪೂರೈಸಿ 101ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸವಿ ನೆನಪಿಗಾಗಿ ಶತಮಾನೋತ್ಸವ ಭವನ ನಿರ್ಮಾಣ

ನೂರು ವರ್ಷ ಪೂರೈಸಿರುವ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ 26 ವರ್ಷಗಳಿಂದಲೂ ಸತತ ಲಾಭದಲ್ಲಿ ಮುನ್ನಡೆಯುತ್ತಿದ್ದು, 2021-22ನೇ ಸಾಲಿನಲ್ಲಿಯು ರೂ.195.26 ಕೋಟಿ ವಾರ್ಷಿಕ ವ್ಯವಹಾರ ನಡೆಸಿ ರೂ.1.51 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಸಂಘವು ನೂರು ವರ್ಷ ಪೂರೈಸಿ 101ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು,ಇದರ  ಸವಿ ನೆನಪಿಗಾಗಿ ಸದಸ್ಯರಿಗೆ ಉಪಯೋಗವಾಗುವಂತೆ ಗುಡ್ಡೆಹೊಸೂರಿನ ಸಂಘದ ಜಾಗದಲ್ಲಿ ಶತಮಾನೋತ್ಸವ ಭವನ ನಿರ್ಮಾಣ ಮಾಡಲಾಗುತ್ತದೆ ಎಂದರು. ಸಂಘವು 3406  ಸದಸ್ಯರನ್ನು ಹೊಂದಿದ್ದು, ಅವರಿಂದ ಪಾಲು ಹಣ ರೂ.3.09 ಕೋಟಿಗಳನ್ನು ಸಂಗ್ರಹಿಸಿದೆ.

ಸಂಘವು ವಿವಿಧ ರೀತಿಯ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು,ಮಾರ್ಚ್ ಅಂತ್ಯಕ್ಕೆ ಒಟ್ಟು ರೂ.41.42 ಕೋಟಿಗಳಷ್ಟು ಠೇವಣಿಯನ್ನು ಸ್ವೀಕರಿಸಿದ್ದು, ಕಳೆದ ಸಾಲಿಗಿಂತ  ಹೆಚ್ಚಿಗೆ ಠೇವಣಿಯನ್ನು ಸಂಗ್ರಹಿಸಿ ಪ್ರಗತಿ ಸಾಧಿಸಿ ಸಂಘದ ದುಡಿಯುವ ಬಂಡವಾಳವನ್ನು ರೂ.  ರೂ.53.62 ಕೋಟಿಗಳಿಗೆ ಹೆಚ್ಚಿಸಿದ್ದೇವೆ ಎಂದರು. ಸಂಘವು ಸ್ವೀಕರಿಸುತ್ತಿರುವ ನಿರಖು ಠೇವಣಿಗಳಿಗೆ ಶೇ.7.50  ರಷ್ಟು ಅಧಿಕ ಬಡ್ಡಿಯನ್ನು ನೀಡುತ್ತಿದ್ದು ಹಿರಿಯ ನಾಗರಿಕರಿಗೆ ಹಾಗೂ ಧಾರ್ಮಿಕ ಸಂಘ ಸಂಸ್ಥೆಗಳಿಗೆ ಶೇ ಅರ್ಧದಷ್ಟು ಹೆಚ್ಚಿನ ಬಡ್ಡಿಯ ದರವನ್ನು ನೀಡುತ್ತಿದ್ದೇವೆ ಎಂದರು.

ಸಂಘದಲ್ಲಿ ಕ್ಷೇಮ ನಿಧಿ ರೂ.2.85 ಕೋಟಿಗಳಷ್ಟು, ಕಟ್ಟಡ ನಿಧಿ 2.44 ಕೋಟಿಗಳಷ್ಟು, ಮರಣ ನಿಧಿ ರೂ.24.27 ಲಕ್ಷಗಳಷ್ಟು, ಮರಣೋತ್ತರ ಸಾಲ ಪರಿಹಾರ ನಿಧಿ ರೂ.26.70 ಲಕ್ಷಗಳಷ್ಟಿದ್ದು ಇನ್ನಿತರೆ ಎಲ್ಲಾ ನಿಧಿಗಳನ್ನು ಸೇರಿಸಿ ರೂ.7.26 ಕೋಟಿಗಳಷ್ಟು ಇತರೆ ನಿಧಿಗಳು ಇರುತ್ತದೆ. ಸಂಘದ ಸದಸ್ಯರ ಆರೋಗ್ಯ ನಿಧಿಯಿಂದ ಕೆಲವು ಸದಸ್ಯರಿಗೆ ರೂ.1.27 ಲಕ್ಷ ಗಳಷ್ಟು ಧನ ಸಹಾಯವನ್ನು ಪಾವತಿಸಿದ್ದೇವೆ. ಈ ಸಾಲಿನಲ್ಲಿ ಸದಸ್ಯರಿಗೆ ಶೇ.16 ಡಿವಿಡೆಂಟ್ ನೀಡಲು ತೀರ್ಮಾನಿಸಿರುತ್ತೇವೆ ಎಂದರು.

ಸಂಘದಲ್ಲಿ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ರೂ.44.80  ಕೋಟಿಗಳಷ್ಟು ಸಾಲವನ್ನು ಈ ಸಾಲಿನಲ್ಲಿ ವಿತರಿಸಲಾಗಿದೆ. ಸಂಘದಲ್ಲಿ 63 ಸ್ವ ಸಹಾಯ ಗುಂಪುಗಳಿದ್ದು ಇವುಗಳಿಗೆ ಸಂಘದ ಸ್ವಂತ ಬಂಡವಾಳದಿಂದ ರೂ.44.80 ಲಕ್ಷಗಳಷ್ಟು ಸಾಲವನ್ನು ವಿತರಿಸಿರುತ್ತೇವೆ.


ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1921  ನೇ ಇಸವಿಯಲ್ಲಿ ಸಂಘದ ಕಾರ್ಯವ್ಯಾಪ್ತಿಯ ಮುಳ್ಳುಸೋಗೆ ಗ್ರಾಮದಲ್ಲಿ ಪ್ರಾರಂಭವಾಗಿದ್ದು, ಸಂಘದ ನೊಂದಣಿ ಸಂಖ್ಯೆಯು 122 ಆಗಿದೆ. ಸಂಘವು ಕಳೆದ ಜೂನ್ 2021 ನೇ ಇಸವಿಗೆ 100 ವರ್ಷಗಳನ್ನು ಪೂರೈಸಿರುತ್ತದೆ. ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು  ತೀರ್ಮಾನ ಕೈಗೊಂಡಿದ್ದು, ಸವಿ ನೆನಪಿಗಾಗಿ  ಶತಮಾನೋತ್ಸವ ಭವನ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಗುಡ್ಡೆಹೊಸೂರಿನಲ್ಲಿರುವ ಸಂಘದ ಜಾಗದಲ್ಲಿ 1200 ಆಸನ ಸಾಮರ್ಥ್ಯದ ಒಂದು ಸಭಾ ಭವನಗಳನ್ನು, ಅಡುಗೆ ಕೋಣೆ, ಊಟದ ಹಾಲ್ ಸೇರಿದಂತೆ ಸುಸಜ್ಜಿತವಾದ ಭವನ ನಿರ್ಮಿಸುವುದರೊಂದಿಗೆ ಆರೋಗ್ಯ ತಪಾಸಣಾ ಕೇಂದ್ರ, ಸಂಘದ ಶಾಖಾ ಕಚೇರಿ, ಕಾಫಿ ಕೆಫೆ, ಸೂಪರ್ ಮಾರ್ಕೆಟ್‌ ತೆರೆಯಲು ಉದ್ದೇಶಿಸಲಾಗಿದೆ ಎಂದರು. ಸಂಘವು ಕೊಡಗಿನ ಸಹಕಾರ ವ್ಯವಸ್ಥೆಯಲ್ಲಿ ತನ್ನದೆ ಛಾಪನ್ನು ಮೂಡಿಸಿ ಉತ್ತಮ ಸೇವೆಯನ್ನು ನೀಡುತ್ತಿದ್ದು ಶತಮಾನೋತ್ಸವದ ವರ್ಷದಲ್ಲಿ ಇನ್ನು ಹೆಚ್ಚಿನ ಸದಸ್ಯರಿಗೆ ಅನುಕೂಲ ಆಗುವ ಯೋಜನೆಯನ್ನು ರೂಪಿಸಿ ರಾಜ್ಯದಲ್ಲಿಯೇ ಒಂದು ಮಾದರಿ ಸಹಕಾರಿ ಸಂಸ್ಥೆಯಾಗಿ ಬೆಳೆಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯವರೆಲ್ಲರೂ ಪ್ರಾಮಾಣಿಕ ಪ್ರಯತ್ನವನ್ನು ಪಡುತ್ತಿದ್ದೇವೆ ಎಂದರು.

ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ  ವಾರ್ಷಿಕ ಮಹಾಸಭೆ ಮೇ.29  ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಸಂಘದ ಅಧ್ಯಕ್ಷ  ಟಿ.ಆರ್ ಶರವಣಕುಮಾರ್‌ ಅಧ್ಯಕ್ಷತೆಯಲ್ಲಿ  ಗಾಯಿತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯಲಿದೆ. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವಿ.ಎಸ್.ಆನಂದ್ ಕುಮಾರ್, ನಿರ್ದೇಶಕರಾದ ಬಿ.ಎ.ಅಬ್ದುಲ್ ಖಾದರ್, ಪಿ.ಬಿ.ಯತೀಶ್, ಪಿ.ಕಾರ್ತೀಶನ್, ಎಚ್.ಎಂ.ಮಧುಸೂದನ್, ಡಿ.ವಿ.ರಾಜೇಶ್, ಮಧುಕುಮಾರ್, ಕವಿತಾಮೋಹನ್, ಕಾರ್ಯನಿರ್ವಹಣಾಧಿಕಾರಿ ಎಸ್.ಬಿ.ಲೋಕೇಶ್ ಇದ್ದರು.