Header Ads Widget

Responsive Advertisement

ಶ್ರವಣ ಸಾಧನ ವಿತರಣಾ ಶಿಬಿರಕ್ಕೆ ಚಾಲನೆ


ಶ್ರವಣ ಸಾಧನ ವಿತರಣಾ ಶಿಬಿರಕ್ಕೆ ಚಾಲನೆ

ಮಡಿಕೇರಿ ಜೂ.17: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗ ಹಾಗೂ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಬಾಹ್ಯ ಸೇವಾ ಕೇಂದ್ರ ಇವರ ವತಿಯಿಂದ ಎರಡು ದಿನಗಳ ಶ್ರವಣ ಸಾಧನ ವಿತರಣಾ ಶಿಬಿರಕ್ಕೆ ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇ ಗೌಡ ಅವರು ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರವಣ ಸಾಧನ ಉಪಕರಣ ಎಲ್ಲಾ ಕಡೆಯಲ್ಲೂ ಸಿಗುತ್ತದೆ. ಸಿಗುವ ಕಡೆ ಅದರ ಉಪಯೋಗವನ್ನು ಬಳಸಿಕೊಳ್ಳಬೇಕು. ಈ ದಿನ ಉಚಿತವಾಗಿ ಫಲಾನುಭವಿಗಳನ್ನು ಗುರುತಿಸಿ ಶ್ರವಣ ಉಪಕರಣ ನೀಡಲಾಗಿದೆ ಎಂದರು.  

ಮಾನವನ ದೇಹದಲ್ಲಿ ಕಿವಿ, ಮೂಗು, ಗಂಟಲು ಅದರದೇ ಆದ ಪ್ರಾಮುಖ್ಯತೆ ಹೊಂದಿದೆ. ಇದರಲ್ಲಿ ಕಿವಿಯು ಅತ್ಯಂತ ಪ್ರಾಮುಖ್ಯವಾದ ಅಂಶ. ಕಿವಿ, ಮೂಗು, ಗಂಟಲು ಅಂಗಗಳನ್ನು ಜೋಪಾನವಾಗಿ ರಕ್ಷಣೆ ಮಾಡಿಕೊಳ್ಳಬೇಕಾದರೆ ಮುನ್ನೆಚ್ಚರ ವಹಿಸಬೇಕು. ಎಷ್ಟು ಶಬ್ದವನ್ನು ಆಲಿಸಬೇಕು ಎಂಬುದನ್ನು ತಿಳಿದಿರಬೇಕು ಎಂದರು. 

ಸರ್ಕಾರವು ಇತ್ತೀಚೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಯಾವ ಸ್ಥಳದಲ್ಲಿ ಯಾವ ರೀತಿಯಾದ ಶಬ್ದವನ್ನು ಯಾವ ಪ್ರಮಾಣದಲ್ಲಿ ಶಬ್ದ ಇರಬೇಕು ಮತ್ತು ಹೇಗೆ ಬಳಸಬೇಕು ಎನ್ನುವ ನಿಯಮವನ್ನು ಜಾರಿಗೆ ತಂದಿದೆ ಎಂದರು. 

ನಾವು ವಾಸಿಸುವ ಪರಿಸರದಲ್ಲಿ, ಮನೆಯೊಳಗೆ ಶಬ್ದವನ್ನು ಮಿತಿಯೊಳಗೆ ಬಳಸುವಂತ ವ್ಯವಸ್ಥೆಯನ್ನು ರೂಡಿಸಬೇಕು ಮತ್ತು ಅಳವಡಿಸಿಕೊಳ್ಳಬೇಕು. ಮನುಷ್ಯನಿಗೆ ನೈಸರ್ಗಿಕವಾಗಿ ಇರುವಂತಹ ಉಪಕರಣಗಳಾದ ಕಿವಿ, ಮೂಗು, ಗಂಟಲು ಯಾವುದೇ ಆದರೂ ಹೆಚ್ಚು ಹಾಳಾಗದ ರೀತಿ ಮುನ್ನೆಚ್ಚರಿಕೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. 

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕೆ.ಬಿ.ಕಾರ್ಯಪ್ಪ ಅವರು ಮಾತನಾಡಿ ಶ್ರವಣ ಉಪಕರಣವು ಒಂದು ತುಂಬಾನೇ ಪ್ರಯೋಜನವಾದ ಸಾಧನ. ಅದರ ಬಗ್ಗೆ ಅರಿತು ಅದರ ಉಪಯೋಗ ಪಡೆಯಬೇಕು. ಫಲಾನುಭವಿಗಳು ಎಲ್ಲರೂ ಉಪಕರಣ ಬಳಸುವಂತಾಗಬೇಕು. ಪ್ರಸ್ತುತ ನೂರು ಉಪಕರಣ ಇಎನ್‍ಟಿ ವಿಭಾಗದಿಂದ ನೀಡಲಾಗಿದೆ. ಸುಮಾರು 15 ರಿಂದ 20 ಸಾವಿರ ಬೆಲೆಬಾಳುವ ಉಪಕರಣವನ್ನು ಫಲಾನುಭವಿಗಳಿಗೆ ನೀಡಿದ್ದಾರೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಆಸ್ಪತ್ರೆಯಲ್ಲಿ ಈವರೆಗೆ ಸುಮಾರು 300 ಸರ್ಜರಿ ಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಇಎನ್‍ಟಿ ವಿಭಾಗದ ಮುಖ್ಯಸ್ಥರಾದ ಡಾ.ಶ್ವೇತಾ ಅವರು ಶ್ರವಣದೋಷದ ಬಗ್ಗೆ ಯಾವ ರೀತಿಯಾಗಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಮತ್ತು ಯಾವ ಪ್ರಮಾಣದಲ್ಲಿ ಶಬ್ದವನ್ನು ಆಲಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಅಧೀಕ್ಷಕರಾದ ಡಾ.ರೂಪೇಶ್ ಗೋಪಾಲ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಜಿತ್ ಪ್ರಾರ್ಥಿಸಿದರು, ಪಂಚಮ್ ಪೊನ್ನಪ್ಪ ನಿರೂಪಿಸಿದರು.