Header Ads Widget

Responsive Advertisement

ಭಾಗಮಂಡಲ ರೈತ ಉತ್ಪಾದನಾ ಸಂಸ್ಥೆಯ ಗೋದಾಮು ಕಟ್ಟಡ ನಿರ್ಮಾಣಕ್ಕೆ 27.52 ಲಕ್ಷ ರೂ ಚೆಕ್ ಹಸ್ತಾಂತರ


ಭಾಗಮಂಡಲ ರೈತ ಉತ್ಪಾದನಾ ಸಂಸ್ಥೆಯ ಗೋದಾಮು ಕಟ್ಟಡ ನಿರ್ಮಾಣಕ್ಕೆ 27.52 ಲಕ್ಷ ರೂ ಚೆಕ್ ಹಸ್ತಾಂತರ

ಮಡಿಕೇರಿ ಜು.22: ಭಾಗಮಂಡಲದ ರೈತ ಉತ್ಪಾದನಾ ಸಂಸ್ಥೆಯ ಗೋದಾಮು ಸಂಗ್ರಹಣಾ ಕೇಂದ್ರ ಮಾರಾಟ ಮಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯಿಂದ 27.52 ಲಕ್ಷ ರೂ. ಅನುದಾನದ ಚೆಕ್‍ನ್ನು  ಸಂಘದ ಅಧ್ಯಕ್ಷರಾದ ಕೋಡಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಶುಕ್ರವಾರ ಹಸ್ತಾಂತರಿಸಿದರು. 

ನಗರದ ಶಾಸಕರ ಕಚೇರಿಯಲ್ಲಿ ಶ್ರೀ ಭಗಂಡೇಶ್ವರ ತೋಟಗಾರಿಕ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ಕೋಡಿ ಪೊನ್ನಪ್ಪ ಮತ್ತು ಸದಸ್ಯರಿಗೆ ಶುಕ್ರವಾರ ಚೆಕ್ ಹಂಸ್ತಾತರಿಸಿದರು.  

ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಕರ್ನಾಟಕ ಸರ್ಕಾರದ ಹೊಸ ಯೋಜನೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಹಾಗೂ ಕೃಷಿಗೆ ಬೇಕಾದ ಗೊಬ್ಬರ ಸಲಕರಣೆಗಳನ್ನು ರೈತರಿಗೆ ಒದಗಿಸಲು ಒಂದು ಸ್ವಯುತವಾದ ಸಂಘವನ್ನು ನಿರ್ಮಿಸಿಕೊಳ್ಳಲು ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆಯವರು ಸಹಕಾರ ನೀಡುತ್ತಾರೆ ಎಂದು ಅವರು ಹೇಳಿದರು. 

ಆ ನಿಟ್ಟಿನಲ್ಲಿ ಪ್ರಗತಿಪರ ರೈತರು ಭಾಗಮಂಡಲದಲ್ಲಿ ಸಹಕಾರಿ ಸಂಸ್ಥೆ ಕಟ್ಟಿಕೊಂಡಿದ್ದು, ಈಗಾಗಲೇ ಸಂಘವು ಜಾಗವನ್ನು ಖರೀದಿ ಮಾಡಿದೆ. ಈ ಸಹಕಾರಿ ಸಂಘಕ್ಕೆ ಬೇಕಾದ ಕಟ್ಟಡ, ಕಚೇರಿ, ಗೋದಾಮುಗಳ ನಿರ್ಮಾಣಕ್ಕೆ ಮೊದಲ ಹಂತವಾಗಿ ರೂ.27.52 ಲಕ್ಷ ರೂ.ಗಳನ್ನು ಸರ್ಕಾರದ ವತಿಯಿಂದ ಸಂಘಕ್ಕೆ ಹಸ್ತಾಂತರಿಸಲಾಗಿದೆ ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು. 

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಸಿ.ಎಂ.ಪ್ರಮೋದ್ ಅವರು ಮಾತನಾಡಿ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿಯಲ್ಲಿ ಶ್ರೀ ಭಗಂಡೇಶ್ವರ ತೋಟಗಾರಿಕ ರೈತ ಉತ್ಪಾದಕರ ಸಂಸ್ಥೆಯನ್ನು ಕಂಪನಿ ಕಾಯಿದೆಯಡಿಯಲ್ಲಿ 2016 ರಲ್ಲಿ ಒಟ್ಟು 1040 ರೈತರನ್ನು ಸಂಸ್ಥೆಯಲ್ಲಿ ನೋಂದಣಿ ಮಾಡಲಾಗಿದೆ ಎಂದರು. 

ಈಗಾಗಲೇ ಸಂಸ್ಥೆಯು ರೈತರಿಂದ ತೋಟಗಾರಿಕೆ ಉತ್ಪನ್ನಗಳನ್ನು ಖರೀದಿಸಿ ಸಂಸ್ಥೆಯ ಹೆಸರಿನಲ್ಲಿ ಬ್ರಾಂಡ್ ಮಾಡಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಹಾಗೂ ರೈತರಿಗೆ ಬೇಕಾಗುವ ಗೊಬ್ಬರ, ಕ್ರಿಮಿನಾಶಕಗಳನ್ನು ಸಹ ಸಂಸ್ಥೆಯಿಂದ ನಿಗಧಿತ ದರದಲ್ಲಿ ನೀಡಲಾಗುತ್ತಿದೆ. ಈ ಸಂಸ್ಥೆಯು ಸಿಂಗತ್ತೂರು ಗ್ರಾಮದಲ್ಲಿ ಸರ್ವೆ ನಂಬರ್ 25/3 ರಲ್ಲಿ 0.50 ಎಕರೆ ಸ್ವಂತ ಜಮೀನನ್ನು ಹೊಂದಿದೆ ಎಂದು ಅವರು ಹೇಳಿದರು.

ಸಂಸ್ಥೆಯ ವ್ಯವಹಾರಗಳನ್ನು ಬಲವರ್ದನೆ ಮಾಡಲು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಗೋದಾಮು, 1 ಸಂಗ್ರಹಣಾ, ಪ್ಯಾಕಿಂಗ್ ಘಟಕ ಮತ್ತು ಮಾರಾಟ ಮಳಿಗೆಯನ್ನು ನಿರ್ಮಾಣ ಮಾಡಲು ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿಯಲ್ಲಿ ರೂ.30.58 ಲಕ್ಷ ಅನುದಾನವನ್ನು ಕಟ್ಟಡ ನಿರ್ಮಾಣಕ್ಕಾಗಿ ಕೊಡಗು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ ಎಂದು ಅವರು ತಿಳಿಸಿದರು.

       ಕಾರ್ಯಕ್ರಮದಲ್ಲಿ ಶ್ರೀ ಭಗಂಡೇಶ್ವರ ತೋಟಗಾರಿಕ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ಕೋಡಿ ಪೊನ್ನಪ್ಪ, ಸಂಸ್ಥೆಯ ಉಪಾಧ್ಯಕ್ಷರಾದ ಕಿಶೋರ್.ಬಿ.ಎಂ. ಸಂಸ್ಥೆಯ ನಿರ್ದೇಶಕರಾದ ಡಿ.ಎಸ್.ಹರ್ಷ, ಪಿ.ಸಿ.ವಿಠಲ, ಕೆ.ಯು.ನಾಗೇಂದ್ರ, ಸಂಸ್ಥೆಯ ವ್ಯವಸ್ಥಾಪಕರಾದ ಬಿ.ಎಸ್.ಬಿನ್ನಿ, ಮಡಿಕೇರಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ಎಂ.ವೈ.ಸತೀಶ್, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕರಾದ ಸಚಿನ್ ಇತರರು ಇದ್ದರು.