Header Ads Widget

Responsive Advertisement

Kannangala: ಗ್ರಾಮದ ವಸತಿ ರಹಿತರಿಗೆ ವಸತಿ ಕಲ್ಪಿಸುವಲ್ಲಿ ನನ್ನ ಮೊದಲ ಪ್ರಯತ್ನ; ಟಿ.ವಿ. ಗಣೇಶ


Kannangala: ಗ್ರಾಮದ ವಸತಿ ರಹಿತರಿಗೆ ವಸತಿ ಕಲ್ಪಿಸುವಲ್ಲಿ ನನ್ನ ಮೊದಲ ಪ್ರಯತ್ನ; ಟಿ.ವಿ. ಗಣೇಶ

ಅಧ್ಯಕ್ಷರು: ಕಣ್ಣಂಗಾಲ ಗ್ರಾಮ ಪಂಚಾಯಿತಿ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪ್ರಸಿದ್ಧ ದೇವಾಲಯ ಬೈರಂಬಾಡ ಸುಬ್ರಹ್ಮಣ್ಯ ದೇವಾಲಯದ ಅನತಿ ದೂರದಲ್ಲಿರುವ ಅಮ್ಮತಿ ಒಂಟಿಯಂಗಡಿ ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಟಿ.ವಿ.ಗಣೇಶರವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. 

ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ಟಿ.ವಿ.ಗಣೇಶರವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮ ಗ್ರಾಮ" ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಕಲೆ ಹಾಕಲಾಯಿತು.

ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ಸಾಮಾಜಿಕ ಕಾರ್ಯಕರ್ತರಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಟಿ.ವಿ.ಗಣೇಶರವರು, 2020ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಅತ್ಯಧಿಕ ಬಹುಮತದಿಂದ ಆಯ್ಕೆಗೊಂಡರು ತದನಂತರ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 

ಇವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಮಹಾಮಾರಿ ಕೋವಿಡ್ 2019ರ ಕಠಿಣ ಕಾಲದ ಆ ಸಮಯದಲ್ಲಿ ಮೊದಲಿಗೆ ಜನತೆಯ ಸುರಕ್ಷತೆಯ ದೃಷ್ಟಿಯಿಂದ ಅವರಿಗೆ ಬೇಕಾದ ಆಹಾರ ಕಿಟ್ಟುಗಳು, ಬಟ್ಟೆ, ಮುಂತಾದ ಅತಿ ತುರ್ತು ಅಗತ್ಯವಿರುವ ವಸ್ತುಗಳನ್ನು ನೀಡುವಲ್ಲಿ ಪಂಚಾಯಿತಿಯ ಇತರೆ ಸದಸ್ಯರುಗಳು ಪಿ.ಡಿ.ಒ. ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಹಗಲಿರುಳು ಕಾರ್ಯೋನ್ಮುಖರಾಗಿದ್ದರು.

ಅದೇ ರೀತಿ 2021 ರಲ್ಲಿ ಕಣ್ಣಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಳೆಗಾಲದ ಸಂದರ್ಭ ನೆರೆ ಹಾವಳಿ ಮುಂತಾದ ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದ ಗ್ರಾಮಸ್ಥರಿಗೆ ತಕ್ಷಣದ ಪರಿಹಾರ ಒದಗಿಸುವಲ್ಲಿ ತಮ್ಮ ಜವಾಬ್ದಾರಿಯನ್ನು ಮೆರೆದರು. ಹೀಗಾಗಿ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾದರು.

2022ರ ಈ ಬಾರಿ ಮಳೆಗಾಲಕ್ಕೂ ಮುಂಚೆ ಗ್ರಾಮದಲ್ಲಿ ಹರಿಯುತ್ತಿರುವ ತೋಡುಗಳಲ್ಲಿ ತುಂಬಿದಂತಹ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವಲ್ಲಿ ಟಿ.ವಿ.ಗಣೇಶ ರವರು ಶ್ರಮವಹಿಸಿದ್ದಾರೆ.

ಕಣ್ಣಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಗ್ರಾಮೀಣ ರಸ್ತೆಗಳ ಬಗ್ಗೆ ವಿವರಿಸಿದ ಗಣೇಶರವರು ಗ್ರಾಮದ ರಸ್ತೆಗಳು ಬಹುಪಾಲು ಹದಗಟ್ಟಿರುವುದು ಇದನ್ನು ಸರಿಪಡಿಸಲು ಅನುದಾನವನ್ನು ತರಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಸ್ವಚ್ಛ ಭಾರತ ಮಿಷನ್ ಬಗ್ಗೆ ಮಾಹಿತಿ ನೀಡಿದ ಗಣೇಶರವರು, ಮನೆ ಮನೆ ಶೌಚಾಲಯ ನಿರ್ಮಾಣ ಕಾರ್ಯವು ಬಹುತೇಕ ಪೂರ್ಣಗೊಂಡಿದ್ದು ಶೇಕಡ 25%ರಷ್ಟು ಬಾಕಿ ಉಳಿದಿದ್ದು ಅದನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಬೀದಿ ದೀಪಗಳ ವ್ಯವಸ್ಥೆಯನ್ನು ಬಹುತೇಕ ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ ಗಣೇಶರವರು, ಅಧಿಕವಾದ ಮಳೆಯಿಂದ ಕೆಲವು ಹಾನಿಗೊಳಗಾಗಿದ್ದು, ಅವುಗಳನ್ನು ಕೂಡ ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಣ್ಣಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಣ್ಣಂಗಾಲ, ಯಡೂರು ಹಾಗೂ ಅಚ್ಚಿ ನಾಡು ಕಂದಾಯ ಗ್ರಾಮಗಳಾಗಿದ್ದು, ಗ್ರಾಮದ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕ್ರಿಯಾ ಯೋಜನೆ ರೂಪಿಸುವಲ್ಲಿ ಪ್ರಯತ್ನಿಸಲಾಗಿದೆ ಎಂದ ಗಣೇಶರವರು ಗ್ರಾಮದ ವಸತಿ ರಹಿತರಿಗೆ ವಸತಿ ಕಲ್ಪಿಸುವಲ್ಲಿ ನನ್ನ ಮೊದಲ ಪ್ರಯತ್ನ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಹಾಗೆ ಗ್ರಾಮದಲ್ಲೇ ಸರ್ವರೂ ಅನ್ಯೋನ್ಯತೆಯಿಂದ, ಪರಸ್ಪರ ಸಹೋದರ ಭಾವದಿಂದ, ಸಂತೋಷ, ಸಮೃದ್ಧಿಯಿಂದ ಬಾಳುವ ನಿಟ್ಟಿನಲ್ಲಿ ಗ್ರಾಮದ ಸರ್ವರ ಸಹಕಾರವನ್ನು ಈ ಸಂದರ್ಭದಲ್ಲಿ ಕಣ್ಣಂಗಾಲ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಟಿ.ವಿ.ಗಣೇಶ ರವರು ಕೋರಿಕೊಂಡಿದ್ದಾರೆ.

ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಟಿ.ವಿ.ಗಣೇಶರವರು ಕಾಂಗ್ರೆಸ್ಸಿನ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಕಣ್ಣಂಗಾಲ ಒಂಟಿಯಂಗಡಿ ಶ್ರೀ ಮುತ್ತಪ್ಪ ದೇವಾಲಯ ಸಮಿತಿ ಸದಸ್ಯರಾಗಿದ್ದಾರೆ. ಶೈಕ್ಷಣಿಕವಾಗಿ ಒಂಟಿಯಂಗಡಿ ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೂಲತಃ ಕೃಷಿಕರಾಗಿರುವ ಟಿ.ವಿ ಗಣೇಶರವರ ತಂದೆ ದಿವಂಗತ ವಾಸು ಹಾಗು ತಾಯಿ ದಿವಂಗತ ಕಲ್ಯಾಣಿ ದಂಪತಿಗಳ ಪುತ್ರರಾಗಿದ್ದಾರೆ. ಪತ್ನಿ ರತ್ನ ಗೃಹಣಿಯಾಗಿದ್ದಾರೆ. ಹಿರಿಯ ಮಗಳು ಮೋನಿಷಾ ವಿವಾಹಿತರಾಗಿದ್ದಾರೆ. ಮತ್ತೋರ್ವ ಮಗಳು ಅನುಷಾ ನರ್ಸಿಂಗ್ ವ್ಯಾಸಂಗ ನಿರತರಾಗಿದ್ದಾರೆ. ಕಿರಿಯ ಮಗಳು ಅಂಜುಶ ಪದವಿ ವ್ಯಾಸಂಗ ನಿರತರಾಗಿದ್ದಾರೆ, ಟಿ.ವಿ.ಗಣೇಶರವರು ಪ್ರಸ್ತುತ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿಗೇರಿ ಎಂಬಲ್ಲಿ ವಾಸವಿದ್ದಾರೆ. ಶ್ರೀಯುತರ ಕೌಟುಂಬಿಕ ಜೀವನವು ಸುಖಕರವಾಗಿರಲಿ ಎಂದು ಹಾರೈಸುತ್ತಾ, ಇವರ ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ  ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.