Header Ads Widget

Responsive Advertisement

ಕೃಷಿಯು ಭಾರತೀಯರ ಹೆಗ್ಗುರುತು; ಇದು ನಮ್ಮ ಸಂಪ್ರದಾಯ, ನಮ್ಮ ಜೀವನ ವಿಧಾನವಾಗಿದೆ: ಉಪ ರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್


ಕೃಷಿಯು ಭಾರತೀಯರ ಹೆಗ್ಗುರುತು; ಇದು ನಮ್ಮ ಸಂಪ್ರದಾಯ, ನಮ್ಮ ಜೀವನ ವಿಧಾನವಾಗಿದೆ: ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ 

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಕೃಷಿಯು ಯಾವಾಗಲೂ ಭಾರತೀಯರ ಹೆಗ್ಗುರುತು ಮತ್ತು ನಮ್ಮ ಕೃಷಿ ಕ್ಷೇತ್ರವು ಬೆಳೆದರೆ ಮಾತ್ರ ರಾಷ್ಟ್ರವಾಗಿ ನಾವು ಏಳಿಗೆ ಹೊಂದಲು ಸಾಧ್ಯ ಎಂದು ಒತ್ತಿ ಹೇಳಿದರು.

ದಿನಾಂಕ: 04-11-2022ರ ಶುಕ್ರವಾರದಂದು ಚಂಡೀಗಢದಲ್ಲಿ ಸಿಐಐ ಆಗ್ರೋ ಟೆಕ್ -2022 ಉದ್ಘಾಟನೆಯ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, ಸುಸ್ಥಿರತೆ ಮತ್ತು ಆಹಾರ ಭದ್ರತೆಯು ಜೊತೆಜೊತೆಯಲ್ಲಿ ಸಾಗುತ್ತದೆ ಎಂದು ಹೇಳಿದರು. "ಸುಸ್ಥಿರ ಕೃಷಿ ಪದ್ಧತಿಗಳಿಲ್ಲದೆ ದೀರ್ಘಾವಧಿಯ ಆಹಾರ ಭದ್ರತೆ ಸಾಧ್ಯವಿಲ್ಲ" ಎಂದು ಅವರು ಒತ್ತಿ ಹೇಳಿದರು.

ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಚಂಡೀಗಢಕ್ಕೆ ಚೊಚ್ಚಲ ಪ್ರವಾಸದ ಮೇಲೆ ಇಂದು ಆಗಮಿಸಿದ ಶ್ರೀ ಧನಕರ್ ಅವರು, ಕೃಷಿಯನ್ನು ಭಾರತದ ಸಂಪ್ರದಾಯ ಮತ್ತು ಜೀವನ ವಿಧಾನ ಎಂದು ಬಣ್ಣಿಸಿದರು. ಕೃಷಿ ಕ್ಷೇತ್ರದಲ್ಲಿ ಕಳೆದ 75 ವರ್ಷಗಳಲ್ಲಿ ಮಾಡಿರುವ ಪ್ರಗತಿಯನ್ನು ಉಲ್ಲೇಖಿಸಿದ ಅವರು, ಮುಂಬರುವ ವರ್ಷಗಳಲ್ಲಿ ನಮ್ಮ ಕೃಷಿಯನ್ನು ಹೊಸ ಅವಶ್ಯಕತೆಗಳು ಮತ್ತು ಹೊಸ ಸವಾಲುಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. "ನಾವೀನ್ಯವು ಕೃಷಿ ಬೆಳವಣಿಗೆಯ ಪ್ರಮುಖ ಚಾಲಕವಾಗಬೇಕು ಮತ್ತು ನಮ್ಮ ರೈತರು ಹವಾಮಾನ ಬದಲಾವಣೆ ಮತ್ತು ಬೆಲೆ ಏರಿಳಿತಗಳ ವಿರುದ್ಧ ರಕ್ಷಣೆ ಹೊಂದಿರಬೇಕು" ಎಂದು ಅವರು ಹೇಳಿದರು.

ನಮ್ಮ ರೈತರಿಗೆ ಸುಸ್ಥಿರ ಆದಾಯವನ್ನು ಸೃಷ್ಟಿಸುವ ಅಗತ್ಯವನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಗಳು ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯತ್ತ ಹೆಚ್ಚಿನ ಗಮನ ಹರಿಸಲು ಕರೆ ನೀಡಿದರು.

ವಿಶ್ವಸಂಸ್ಥೆಯು 2023 ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸುವ ಭಾರತದ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ಪ್ರಸ್ತಾಪಿಸಿದ ಶ್ರೀ ಧನಕರ್, ಆಹಾರದ ಕೊರತೆ, ನೀರಿನ ಕೊರತೆ ಮತ್ತು  ಹಿಂದೆಂದೂ ಕಂಡಿಲ್ಲದ ಹವಾಮಾನ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ, ಸಿರಿಧಾನ್ಯಗಳ ಕೃಷಿಯತ್ತ ಗಮನ ಹರಿಸುವುದು ಉತ್ತಮ ಪರಿಹಾರವಾಗಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಮಣ್ಣಿನ ಆರೋಗ್ಯ ಕಾರ್ಡ್ಗಳು, ಫಸಲ್ ಬಿಮಾ ಯೋಜನೆ ಮತ್ತು ಕುಸುಮ್ ಯೋಜನೆಗಳಂತಹ ರೈತರ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ವಿವಿಧ ಉತ್ತೇಜಕ ಕ್ರಮಗಳ ಬಗ್ಗೆ ಹೇಳಿದ ಉಪಾಧ್ಯಕ್ಷರು, ರೈತರು ಭಾರತದ ಬೆಳವಣಿಗೆಯ ಬೆನ್ನೆಲುಬು; ಅವರ ಕಾಳಜಿಯನ್ನು ಸಹ ಪರಿಹರಿಸಲು ಕಾಳಜಿ ವಹಿಸಬೇಕು. ಕೃಷಿ ವಲಯವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ  ವಿನೂತನ ಪರಿಹಾರಕ್ಕಾಗಿ ಕರೆ ನೀಡಿದ ಅವರು, ಸಂಶೋಧನಾ ಸಂಸ್ಥೆಗಳು ಮತ್ತು ಉದ್ಯಮದ ನಡುವೆ ಹೊಂದಿಕೆಯನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಉಪರಾಷ್ಟ್ರಪತಿಯವರ  ಪತ್ನಿ ಡಾ. ಸುದೇಶ್ ಧನಕರ್, , ಪಂಜಾಬ್ ರಾಜ್ಯಪಾಲರು ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಶ್ರೀ ಬನ್ವಾರಿಲಾಲ್ ಪುರೋಹಿತ್, ಹರಿಯಾಣದ ಗವರ್ನರ್ ಶ್ರೀ ಬಂಡಾರು ದತ್ತಾತ್ರೇಯ, , ಸಿಐಐ  ಆಗ್ರೋ ಟೆಕ್ ಇಂಡಿಯಾ 2022 ಅಧ್ಯಕ್ಷರಾದ ಶ್ರೀ ಸಂಜೀವ್ ಪುರಿ, ಸಿಐಐ  ಪ್ರತಿನಿಧಿಗಳು, ರೈತರು , ಉದ್ಯಮಿಗಳು ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪಂಜಾಬ್ ವಿಶ್ವವಿದ್ಯಾನಿಲಯದ 3ನೇ ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಉಪರಾಷ್ಟ್ರಪತಿಗಳು ಭಾಗವಹಿಸಿದರು

ಸಿಐಐ  ಆಗ್ರೋ ಟೆಕ್ -2022 ಅನ್ನು ಉದ್ಘಾಟಿಸಿದ ನಂತರ, ಉಪರಾಷ್ಟ್ರಪತಿಗಳು ಪಂಜಾಬ್ ವಿಶ್ವವಿದ್ಯಾನಿಲಯದ 3 ನೇ ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಅಲ್ಲಿ ಅವರು, ಕಲಿತ ಶಿಕ್ಷಣಸಂಸ್ಥೆಗೆ ಮರಳಿ ನೀಡುವ ಮತ್ತು ಅದರ ಮೂಲಕ ಸಮಾಜಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುವುದರ ಪ್ರಾಮುಖ್ಯವನ್ನು ಒತ್ತಿಹೇಳಿದರು.

ನಳಂದಾದಂತಹ ಪ್ರಾಚೀನ ಭಾರತದ ಹೆಸರಾಂತ ಸಂಸ್ಥೆಗಳನ್ನು ಉಲ್ಲೇಖಿಸಿದ ಅವರು, ಆ ಗತ ವೈಭವವನ್ನು ಮರಳಿ ಪಡೆಯುವ ಗುರಿಗೆ ಶಿಕ್ಷಣತಜ್ಞರು, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು. ಪಂಜಾಬ್ ವಿಶ್ವವಿದ್ಯಾನಿಲಯವು ರಾಜಕೀಯ, ಆಡಳಿತ, ವಿಜ್ಞಾನ, ಕೈಗಾರಿಕೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅನೇಕ ದಿಗ್ಗಜರನ್ನು ಉತ್ಪಾದಿಸುತ್ತಿದೆ ಎಂದು ಶ್ಲಾಘಿಸಿದ ಶ್ರೀ ಧನಕರ್, ಎಲ್ಲ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪಡೆಯಲು ಅವಕಾಶವನ್ನು ಪಡೆಯುವ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಸಹಾಯ ಮಾಡಬೇಕೆಂದು ಹೇಳಿದರು.

ದೂರದೃಷ್ಟಿಯ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಶ್ಲಾಘಿಸಿದ ಉಪರಾಷ್ಟ್ರಪತಿಗಳು, ಇದು ಭಾರತವನ್ನು ಹೆಚ್ಚಿನ ಸಮೃದ್ಧಿಯ ಹಾದಿಯಲ್ಲಿ ಮುನ್ನಡೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಂಜಾಬ್ ರಾಜ್ಯಪಾಲರಾದ ಶ್ರೀ ಬನ್ವಾರಿಲಾಲ್ ಪುರೋಹಿತ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಸೋಮ್ ಪರಾಕಾಶ್, ಪಂಜಾಬ್ ಸರ್ಕಾರದ ಶಿಕ್ಷಣ ಸಚಿವ ಗುರ್ಮೀತ್ ಸಿಂಗ್ ಮೀತ್ ಹೇಯರ್, ಪಂಜಾಬ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ರಾಜ್ ಕುಮಾರ್, ಅಧ್ಯಾಪಕರು, ಹಳೆಯ ವಿದ್ಯಾರ್ಥಿಗಳು ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.