Header Ads Widget

Responsive Advertisement

ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಜಾತ್ರಾ ಮಹೋತ್ಸವ ಏಪ್ರಿಲ್ 6 ರಿಂದ 10 ರವರೆಗೆ


ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಶ್ರೀ ಮುತ್ತಪ್ಪ ದೇವಾಲಯ ಉತ್ಸವ ಸಮಿತಿಯ ಅಧ್ಯಕ್ಷ  ಸುರೇಶ್ ಮುತ್ತಪ್ಪ ಹಾಗೂ ಮಹಿಳಾ ಸಮಿತಿ ಅಧ್ಯಕ್ಷೆ ಶಾರದಾ ರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. 

ಸಭೆಯಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಶಕ್ತಿ ಗಣಪತಿ ಸ್ವಾಮಿ, ಶ್ರೀ ಭಗವತಿ, ಶ್ರೀ ಮುತ್ತಪ್ಪ ಸ್ವಾಮಿ, ಶ್ರೀ ತಿರುವಪ್ಪ ಸ್ವಾಮಿ ಸೇರಿದಂತೆ 14 ದೇವಾನುದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮತ್ತು ಶ್ರೀ ಮುತ್ತಪ್ಪ ಜಾತ್ರೆ ಹಾಗೂ ದೈವ ಕೋಲಗಳ ಉತ್ಸವವನ್ನು ಈ ಬಾರಿ  ಏಪ್ರಿಲ್ 6 ರಿಂದ 10 ರವರೆಗೆ ವಿವಿಧ ದೈವಿಕ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಸಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು. 

ಈ ಸಂದರ್ಭ ಜಾತ್ರಾ ಮಹೋತ್ಸವದ ವಿವಿಧ ಸಮಿತಿಗಳನ್ನು ಆಯ್ಕೆ ಮಾಡಲಾಯಿತು. ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾಗಿ ರೇಷ್ಮ ದೇವಯ್ಯ, ನೈರ್ಮಲ್ಯ ಸಮಿತಿ ಪ್ರಧಾನ ಸಂಚಾಲಕರಾಗಿ ರಾಣಿ ನೀಲಮ್ಮ ಇವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ 2021ರ  ಜಾತ್ರಾ ಮಹೋತ್ಸವದ ಪೋಸ್ಟರನ್ನು ಬಿಡುಗಡೆ ಮಾಡಲಾಯಿತು. 

ಏಪ್ರಿಲ್ 9 ರಂದು ಸಂಜೆ 5 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಿಂದ ಹೊರಡುವ ಮುತ್ತಪ್ಪ ದೇವರ ಕಳಸ ಮೆರವಣಿಗೆಗೆ ಹೆಂಗಸರು ಮತ್ತು ಹೆಣ್ಣುಮಕ್ಕಳು ತಾಲಾಪೊಲಿಯೊಂದಿಗೆ ಭಾಗವಹಿಸುವಂತೆ ಮನವಿ ಮಾಡಲಾಯಿತು. ಅಂದು ರಾತ್ರಿ ಶ್ರೀ ಮುತ್ತಪ್ಪ, ಶ್ರೀ ತಿರುವಪ್ಪ, ಶ್ರೀ ವಿಷ್ಣುಮೂರ್ತಿ, ಶ್ರೀ ಗುಳಿಗ, ಶ್ರೀ ಕುಟ್ಟಿಚಾತನ್, ಶ್ರೀ ಪೋದಿ ಶ್ರೀ ಶಿವಭೂತಂ ಸೇರಿದಂತೆ ವಿವಿಧ ದೈವ ಕೋಲ ತೆರೆಯೊಂದಿಗೆ ಶ್ರೀ ವಿಷ್ಣುಮೂರ್ತಿ ಮೇಲೇರಿ ನಡೆಯಲಿವೆ.

ರಾತ್ರಿ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಎಲ್ಲಾ ಕಲಾವಿದರಿಗೆ ನೆನಪಿನ ಕಾಣಿಕೆಯನ್ನು ನೀಡಲಾಗುವುದು ಎಂದು ದೇವಾಲಯದ ಟ್ರಸ್ಟಿ ಎಂ.ಸಿ. ಪ್ರಸಾದ್ ಹಾಗೂ ಉತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.


Search Coorg Media

Coorg's Largest Online Media Network