Header Ads Widget

Responsive Advertisement

ದುರಾದೃಷ್ಟದ ಕಾಲ ಮುಗಿಸುವ ಹಂತದಲ್ಲಿ, ನವಭಾರತಕ್ಕೆ ನಾಂದಿ ಹಾಡೋಣ

ದುರಾದೃಷ್ಟದ ಕಾಲ ಮುಗಿಸುವ ಹಂತದಲ್ಲಿ, ನವಭಾರತಕ್ಕೆ ನಾಂದಿ ಹಾಡೋಣ


ಮಧ್ಯರಾತ್ರಿಯ ಗಂಟೆ ಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲತೆ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ. ಇತಿಹಾಸದಲ್ಲಿ ಅಪರೂಪವಾಗಿ ಬರುವ ಇಂಥ ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ 1947ರ ಆಗಷ್ಟ್‌ 15ರಂದು ಹಿಂದುಸ್ಥಾನವು ನವಯುಗಕ್ಕೆ ಕಾಲಿಟ್ಟಿತ್ತು. ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುವೆಡೆಗೆ ಸಾಗಿತ್ತು. 

ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸುವಹಂತದಲ್ಲಿದ್ದೇವೆ, ಯಾರು ಏನೇ ಮಾಡಿದರೂ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ 370 ಕಲಂ ಅನ್ನು ಕಿತ್ತೋಗೆಯಲು ಸಾಧ್ಯವಿಲ್ಲ ಎಂದುಕೊಂಡಿದ್ದವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶಾಕ್ ನೀಡಿತ್ತು.  ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಆ ಒಂದು ಸಹಿಯಿಂದ 370 ಕಲಂ ಇತಿಹಾಸದ ಪುಟ ಸೇರುವಂತಾಯಿತು. ಮತ್ತೋಮ್ಮೆ ಭಾರತವು ತನ್ನನ್ನು ತಾನು ಮತ್ತೆ ಭವ್ಯತ್ತೆಯಡೆಗೆ ಸಾಗಲು ಅಣಿಗೊಳಿಸಿಕೊಂಡಿತ್ತು.

ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿ ವರ್ಷ ಆಗಸ್ಟ್ 15 ರಂದು ಆಚರಿಸಲಾಗುತ್ತದೆ. ಬ್ರಿಟೀಷರ ಆಡಳಿತದಿಂದ ಭಾರತ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ದೇಶದಾದ್ಯಂತ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ "ಜನ ಗಣ ಮನ"ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ.

ದೇಶ ನಮಗೇನು ಕೊಟ್ಟಿದೆ? ಸ್ವಾತಂತ್ರ್ಯ ಪೂರ್ವದ ಭಾರತವೇ ಚೆನ್ನಾಗಿತ್ತು... ಅಂದಿಗೂ ಇಂದಿಗೂ ಏನೊಂದೂ ವ್ಯತ್ಯಸವಾಗಿಲ್ಲ... ಎಂದೆಲ್ಲಾ ಬೊಬ್ಬಿರಿವವರು ಕೇವಲ ತಮ್ಮ ವೈಯಕ್ತಿಕ ನೆಲೆಯಲ್ಲಷ್ಟೇ ಯೋಚಿಸುತ್ತಾರೆ.... ತಮಗಾದ, ತಮ್ಮವರಿಗಾದ, ತಮ್ಮ ಸಮುದಾಯಕ್ಕಾದ, ತಮ್ಮ ಜಾತಿಗಾದ ಕೆಲವೊಂದು ಅನ್ಯಾಯವನ್ನು ಮಾತ್ರ ಮೇಲೆರಿಸಿಕೊಂಡು ತೀರಾ ಸಂಕುಚಿತ ಮನೋಭಾವವನ್ನು ಹೊಂದಿ, ಇಂದಿನ ದಿನವನ್ನೇ ಧಿಕ್ಕರಿಸುವಂತವರ ಅನಾರೋಗ್ಯಕರ ಮನಃಸ್ಥಿತಿಗೆ  ಸಂಪೂರ್ಣ ಅನುಕಂಪವಿದೆ. ಅಂತಹವರಿಗೆ ದಾಸ್ಯತನದಲ್ಲೇ ದಿನಗಳೆಯಬೇಕಾಗಿದ್ದ ಅಂದಿನ ಜೀವನದ ಅರಿವನ್ನು ಆ ಭಗಂವತ ನೀಡದಿರುವುದೇ ಅವರ ಇಂದಿನ ಈ ಅನಾರೋಗ್ಯಕರ ಮನಃಸ್ಥಿತಿಗೆ ಕಾರಣ ಎಂದೆನ್ನಿಸುತ್ತದೆ. 

ತನ್ನ ದೇಶವನ್ನು, ಸ್ವಂತ ನೆಲವನ್ನು, ಅದರ ಮೇಲಿನ ಅಭಿಮಾನವನ್ನು ಅಲ್ಲಗಳೆಯುವ, ದೇಶಾಭಿಮಾನವನ್ನು ಧಿಕ್ಕರಿಸುವ ಸ್ವಾತಂತ್ರ್ಯ ಸಿಕ್ಕಿರುವುದು ಈ ಸ್ವತಂತ್ರ ಭಾರತದಲ್ಲೇ.... ಹುಟ್ಟಿದ ನೆಲದ ಬಗ್ಗೇ ಸದಾ ಅಸಮಾಧನ ತೋರುತ್ತಾ, ವ್ಯಂಗ್ಯವಾಡುತ್ತಾ,  ಕ್ರಾಂತಿಯ ನೆಪದಲ್ಲಿ ದೇಶವನ್ನೇ ಇಬ್ಭಾಗಿಸಿ ರಕ್ತದೋಕುಳಿ ಚೆಲ್ಲುವ ಮನೋಭಾವ ಹುಟ್ಟಲು, ಬೆಳೆಯಲು ಸಾಧ್ಯವಾಗಿದ್ದೂ ಇದೇ ಸ್ವತಂತ್ರ ಭಾರತದಲ್ಲೇ! ಎಂಬುವು ಇಂತಹವರಿಗೆ ನೆನೆಪಿರಲಿ.

ಭಾರತ ಬ್ರಿಟೀಷರ ಕಪಿಮುಷ್ಟಿಯಿಂದ ಸ್ವತಂತ್ರಗೊಂಡು 74 ವರ್ಷಗಳೇ ಕಳೆದರೂ ನಾವಿನ್ನೂ ಸಂಪೂರ್ಣವಾಗಿ ಸ್ವತಂತ್ರರಾಗಿದ್ದೇವೆಯೇ ಎಂಬ ಭಾವನೆ ದೇಶದ ಹಲವರನ್ನು ಹಲವು ಸಮಯದಲ್ಲಿ ಕಾಡಿರಬಹುದು. ಗಾಂಧೀಜಿಯವರ ರಾಮರಾಜ್ಯದ ಕಲ್ಪನೆ ಕೇವಲ ಕಲ್ಪನೆಯಾಗಿಯೇ ಉಳಿಯಿತು. ಯಾವತ್ತು ಒಬ್ಬ ಮಹಿಳೆ ಒಬ್ಬಂಟಿಯಾಗಿ ಮಧ್ಯರಾತ್ರಿಯಲ್ಲಿ ಯಾವ ಅಪಾಯವೂ ಇಲ್ಲದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾಳೋ ಅವತ್ತೇ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಬರುವುದು ಎಂದು ಗಾಂಧೀಜಿ ಹೇಳಿದ್ದರು. ಅವರು ಹೇಳಿದ ಆ ಸ್ವಾತಂತ್ರ್ಯ ಬ್ರಿಟೀಷರು ಬಿಟ್ಟುಹೋದ 74 ವರ್ಷಗಳ ನಂತರವೂ ಬಂದಿಲ್ಲ. ಸ್ವಾತಂತ್ರ್ಯೋತ್ಸವದ ಇಂದಿನ ದಿನದಿಂದ ತಮಗೂ ಅಚ್ಛೇ ದಿನ್ ಬರಬಹುದೆಂದು ದೇಶದ ಹೆಂಗೆಳೆಯರು ನಿರೀಕ್ಷಿಸಬಹುದು.

ಭಾರತವನ್ನು ಸದೃಢಗೊಳಿಸುವಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಆದರ್ಶ, ಯೋಧರ ತ್ಯಾಗ ಹಾಗೂ ರೈತರ ಪರಿಶ್ರಮವಿದೆ. ಸರ್ವರಿಗೂ ಸಮಬಾಳು ದೊರೆಯಬೇಕು. ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಇರಬೇಕು. ದೇಶ ಎಂದರೆ ಬರೀ ಮಣ್ಣಲ್ಲ, ಜನರು…  ಜನರ ಮನಸ್ಸುಗಳು. ಆ ಮನಸ್ಸುಗಳು ಪರಿಶುದ್ಧವಾಗಿದ್ದಲ್ಲಿ ದೇಶ ಅಭಿವೃದ್ಧಿ ಕಾಣುತ್ತದೆ. ಹಿಂದಿನ ಕರಾಳ ದಿನಗಳು ಮರೆಯಾಗಿ ಹಳೆ ನೀರು ಹರಿದು ಹೊಸ ನೀರು ಬರುವಂತೆ ಹೊಸ ಸರ್ಕಾರ ಬಂದು ಜನರ ಆಶಯದಂತೆ ಅಭಿವೃದ್ಧಿಯತ್ತ ಕೆಲಸ ಮಾಡುತ್ತಿರುವಾಗ ನಾವೂ ಅದರ ಜೊತೆ ಕೈಜೋಡಿಸೋಣ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್-ಸಬ್ ಕಾ ವಿಶ್ವಾಸ್’ ಎಂಬ ಧ್ಯೇಯವನ್ನು ನೆನಪಿಟ್ಟುಕೊಂಡು ರಾಷ್ಟ್ರಕಟ್ಟುವ ಕೆಲಸ ಮಾಡುತ್ತಾ....75ನೇ ಸ್ವಾತಂತ್ರ್ಯೋತ್ಸವದಂದು ನವಭಾರತಕ್ಕೆ ನಾಂದಿ ಹಾಡೋಣ.

ಲೇಖಕರು: ✍️.... ವಿವೇಕ್‌ ನರೇನ್

                                   (ಪತ್ರಕರ್ತರು)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,