Header Ads Widget

Responsive Advertisement

1965 ಎ ಗ್ರೇಟ್‌ ವಾರಿಯರ್‌ "ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ"

"ಸೆಪ್ಟಂಬರ್ 7ರ ಇಂದು ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯನವರ 56ನೇ ಹುತಾತ್ಮ ದಿನ" ಈ ಕುರಿತು ವಿಶೇಷ ಲೇಖನ:

1965 ಎ ಗ್ರೇಟ್‌ ವಾರಿಯರ್‌ "ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ"


ಕ್ಷಾತ್ರ ಪರಂಪರೆಯ ಇತಿಹಾಸ ಹೊಂದಿರುವ ಕೊಡಗಿನ ಮಣ್ಣಿನಲ್ಲಿ ಭಾರತೀಯ ವಾಯುಸೇನಾ ಪಡೆಯ ಸ್ಕ್ವಾಡ್ರನ್ ಲೀಡರ್ ಹುದ್ದೆಯನ್ನೇರಿ ತನ್ನ ಜೀವದ ಹಂಗು ತೊರೆದು ಶತ್ರುಗಳೊಂದಿಗೆ ಹೋರಾಡಿ ಕೀರ್ತಿ ಮೆರೆಯುತ್ತಲೇ ವೀರ ಮರಣವನ್ನಪ್ಪಿ ಇಂದಿಗೆ 56 ವರ್ಷಗಳೇ ಕಳೆದು ಹೋಗಿವೆ.

ಭಾರತ-ಪಾಕ್ ನಡುವೆ 1965ರಲ್ಲಿ ನಡೆದಿದ್ದ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಲಿದಾನಗೈದ ಕೊಡಗಿನ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯರವರು. ಭಾರತ-ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ತಮ್ಮ ಹಳೆಯ ವಿಮಾನದ ಮೂಲಕ ಹೊಡೆದುರುಳಿಸುವ ಮೂಲಕ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ವೀರಮರಣವನ್ನಪ್ಪಿದ್ದರು. ವಿಮಾನದ ಎರಡೂ ರೆಕ್ಕೆಗಳಿಗೆ ಬೆಂಕಿ ತಗುಲಿದ್ದರೂ ಅದರ ಮೂಲಕವೇ ಯುದ್ಧ ಮಾಡಿದ್ದ ಸ್ಕ್ವಾ.ಲೀ. ದೇವಯ್ಯ ಅವರು ತಮ್ಮ ತಾಯಿನಾಡಿನ ರಕ್ಷಣೆಗಾಗಿ ಸಾಹಸವನ್ನು ಮರೆದಿದ್ದರು. ಈ ವಿಚಾರವನ್ನು ಪಾಕ್ ಸೇನೆಯ ಯುದ್ಧ ವಿಮಾನದ ಪೈಲಟ್ ಆಗಿದ್ದ ಅಮ್ಜದ್ ಹುಸೇನ್ ಅವರು ಆನಂತರದ ದಿನಗಳಲ್ಲಿ ತಮ್ಮ ದಿನಚರಿಯಲ್ಲಿ ತಿಳಿಸಿದ್ದರು. 

ಈ ವೀರ ಸೇನಾನಿಯ ಜೀವನ ಕಥನ ರೋಚಕವಾಗಿದ್ದು, ಅಂದು 1965 ರಲ್ಲಿ ಭಾರತ-ಪಾಕ್ ಯುದ್ಧದ ಸಂದರ್ಭ ವಿಂಗ್ ಕಮಾಂಡರ್ ಆಗಿದ್ದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ .ಬಿ.ದೇವಯ್ಯ ನವರಿಗೆ ಪಾಕ್ ಭದ್ರ ಕೋಟೆಯಾಗಿದ್ದ ಸರಗೋಡ ವಾಯುನೆಲೆಯ ಮೇಲೆ ದಾಳಿ ನಡೆಸುವ ಜವಾಬ್ದಾರಿ ವಹಿಸಲಾಗಿತ್ತು. ಎದೆಗುಂದದ ದೇವಯ್ಯ ಪ್ರಾಣದ ಹಂಗು ತೊರೆದು ತನ್ನದೇ ವಿಮಾನದ ಹೋರಾಟದಲ್ಲಿ ರಣರಂಗದಲ್ಲಿ ಭೂ ಸೇನಾ ಸೈನಿಕರು ಮುಖಾಮುಖಿಯಾಗಿ ಹೇಗೆ ಹೋರಾಡುತಾರೋ ಅದೇ ರೀತಿ ವಾಯು ಸೇನೆಯಲ್ಲೂ ಮುಖಾಮುಖಿ ಹೋರಾಡುವ ಅಪಾಯಕಾರಿ ಯುದ್ಧವಾದ ಡಾಗ್ ಫೈಟನ್ನು ಕೆಚ್ಚೆದೆಯಿಂದ ಮಾಡಿ ತಮ್ಮ ಯುದ್ಧ ವಿಮಾನ ಪತನಗೊಂಡು ಸುಟ್ಟು ಕರಕಲಾದ ಪರಿಣಾಮ ದೇವಯ್ಯ ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಅಮರರಾದರು.

ದೇಶ ವಿದೇಶಗಳಿಂದ ಕೊಡಗು ಜಿಲ್ಲೆಗೆ ಆಗಮಿಸುವವರಿಗೆ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯನವರ ರಾಷ್ಟ್ರಪ್ರೇಮದ ಸಾಹಸವನ್ನು ತಿಳಿಸಲು ಮತ್ತು ವೀರಯೋಧನ ಸ್ಮರಣಾರ್ಥ ಗೌರವ ಸಲ್ಲಿಸುವ ಉದ್ದೇಶದಿಂದ ಮಡಿಕೇರಿ ನಗರದ ಹೃದಯ ಭಾಗದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಿ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ ಎಂದು ನಾಮಕರಣ ಮಾಡಲಾಗಿದೆ. 

1965ರ ಸೆಪ್ಟಂಬರ್ 7 ರಂದು ನಡೆದ ಈ ಘಟನೆಯಲ್ಲಿ ದೇವಯ್ಯ ತನ್ನ ಸೇನಾ ಜೀವನದಲ್ಲಿ ಸಾಹಸ ಮೆರೆದು ತನ್ನ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರೂ ಇವರ ಸಾಹಸಗಾಥೆ ಜಗತ್ತಿಗೆ ತಿಳಿಯಲು ಸಾಕಷ್ಟು ವರ್ಷಗಳೇ ಕಳೆದುಹೋಯಿತು. 23 ವರ್ಷಗಳ ನಂತರ ಅವರ ಹೋರಾಟದ ಪರಿಯನ್ನು ಶತ್ರು ದೇಶದ ಪೈಲಟ್ ಒಬ್ಬ ವಿವರಿಸಿದ್ದು, ಬ್ರಿಟೀಷ್ ಪತ್ರಕರ್ತನೊಬ್ಬ ಭಾರತ-ಪಾಕಿಸ್ತಾನ ಯುದ್ಧದ ಕುರಿತು ರಚಿಸಿದ ಕೃತಿಯಲ್ಲೂ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯನವರ ಸಾಧನೆ ಹಾಗೂ ಹೋರಾಟ ಅಪ್ರತಿಮವಾದುದೆಂದು ಇಡೀ ಜಗತ್ತಿಗೆ ತಿಳಿಯಿತು.

ಅಜ್ಜಮಾಡ ದೇವಯ್ಯರವರು ಭಾರತದ ಉಳಿದ ವಿಮಾನಗಳ ರಕ್ಷಣೆಗಾಗಿ ತನ್ನ ವಿಮಾನದೊಂದಿಗೆ ಕಾದಾಟಕ್ಕೆ ನಿಂತು, ತಮ್ಮ ದುರ್ಬಲ ವಿಮಾನದಲ್ಲಿ ಕೆಚ್ಚೆದೆಯಿಂದ ಹೋರಾಡಿ ಶತ್ರು ರಾಷ್ಟ್ರದ ವಿಮಾನ ಹೊಡೆದುರುಳಿಸಿ ಹುತಾತ್ಮರಾದ್ದರು. ದೇವಯ್ಯ ಅವರ ‘ಫೈಟರ್‌’ ವಿಮಾನ ಕಣ್ಮರೆಯಾದ ನಂತರ ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸೇನೆ ಅವರನ್ನು ನಾಪತ್ತೆಯಾದವರ ಪಟ್ಟಿಗೆ ಸೇರಿಸಿತ್ತು. ಆದರೆ, 1979ರಲ್ಲಿ ಬ್ರಿಟನ್ ಲೇಖಕರೊಬ್ಬರು ಬರೆದ ಪುಸ್ತಕದಲ್ಲಿ ದೇವಯ್ಯ ತನ್ನ ಪ್ರಾಣ ಹಂಗು ತೊರೆದು, ದೇಶದ ರಕ್ಷಣೆಗೆ ಮುಂದಾದ ಸಂದರ್ಭವನ್ನು ಸ್ಮರಿಸಿದ್ದರು. ನಂತರ, ಸರ್ಕಾರ ದೇವಯ್ಯ ಅವರನ್ನು ಹುತಾತ್ಮರೆಂದು ಪರಿಗಣಿಸಿ ಮಹಾವೀರ ಪ್ರಶಸ್ತಿ ನೀಡಿ ಗೌರವಿಸಿತ್ತು. ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬೋಪಯ್ಯ ದೇವಯ್ಯ ಅವರು ವಾಯುಸೇಮೆಯಲ್ಲಿ ಮಹಾ ವೀರ ಚಕ್ರ ಪ್ರಶಸ್ತಿ ಗೌರವ ಸಿಕ್ಕಿರುವ ಏಕೈಕ ಯೋಧರು ಎಂಬುದು ಹುಬ್ಬೇರಿಸುವಂತಹ ವಿಚಾರ. ಪರಮವೀರ ಚಕ್ರ ಪ್ರಶಸ್ತಿ ನಂತರದ ಎರಡನೇ ಪ್ರತಿಷ್ಠಿತ ಪ್ರಶಸ್ತಿಯೇ ಮಹಾವೀರ ಚಕ್ರದ ಪ್ರಶಸ್ತಿ. ಈ ರಾಷ್ಟ್ರ ಭಕ್ತ ವೀರಯೋಧನ ನೆನಪು ಚಿರಸ್ಥಾಯಿ.

✍️.... ಅರುಣ್‌ ಕೂರ್ಗ್‌ 

            (ಪತ್ರಕರ್ತರು)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,