Header Ads Widget

Responsive Advertisement

ಸರ್ಕಾರಿ ಆಚರಣೆಯಾಗಿ ಕೈವಾರ ತಾತಯ್ಯ ಜಯಂತಿ; ಕೊಡಗು ಬಲಿಜ ಸಮಾಜ ಸಂಭ್ರಮಾಚರಣೆಗೆ ನಿರ್ಧಾರ

ಸರ್ಕಾರಿ ಆಚರಣೆಯಾಗಿ ಕೈವಾರ ತಾತಯ್ಯ ಜಯಂತಿ; ಕೊಡಗು ಬಲಿಜ ಸಮಾಜ ಸಂಭ್ರಮಾಚರಣೆಗೆ ನಿರ್ಧಾರ


ಗೋಣಿಕೊಪ್ಪಲು,ಮಾ.6: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂಗಡ ಪತ್ರದಲ್ಲಿ ಕಾಲಜ್ಞಾನಿ ಕೈವಾರ ತಾತಯ್ಯ ಜಯಂತೋತ್ಸವವನ್ನು ವರ್ಷಂಪ್ರತಿ ಮಾರ್ಚ್ 27ರಂದು ಸರ್ಕಾರಿ ಆಚರಣೆಯಾಗಿ ಘೋಷಣೆ ಮಾಡಿರುವದನ್ನು ಕೊಡಗು ಬಲಿಜ ಸಮಾಜ ಸ್ವಾಗತಿಸಿದ್ದು, ಬಲಿಜ ಬಂಧುಗಳ ಸಹಕಾರದೊಂದಿಗೆ ಅಂದು ಜಿಲ್ಲೆಯಾದ್ಯಂತ ಕಾಲಯೋಗಿ ಶ್ರೀ ಯೋಗಿನಾರೇಯಣ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ತಿಳಿಸಿದ್ದಾರೆ.

  ಗೋಣಿಕೊಪ್ಪಲಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,ಬೆಂಗಳೂರು ಸಂಸದ ಪಿ.ಸಿ.ಮೋಹನ್ ಮತ್ತು ರಾಜ್ಯದ ವಿವಿಧ ಬಲಿಜ ಮುಖಂಡರ ಮನವಿ ಮೇರೆ ಮುಖ್ಯಮಂತ್ರಿಗಳು ನಮ್ಮ ಹಲವು ವರ್ಷದ ಬೇಡಿಕೆಯನ್ನು ಈಡೇರಿಸಿದ್ದಾರೆ. ಕೊಡಗು ಬಲಿಜ ಸಮಾಜ ಮೂಲಕ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ತಾ.6-12-2020 ರಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಕೈವಾರ ತಾತಯ್ಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಈ ಬಾರಿ ಕೊಡಗು ಜಿಲ್ಲೆಯ ವಿವಿಧ ಪಟ್ಟಣ ಪ್ರದೇಶದಲ್ಲಿ ಜಯಂತೋತ್ಸವ ಆಚರಣೆಗೆ ಪೂರ್ವಭಾವಿ ಸಿದ್ಧತೆ ಆರಂಭವಾಗಿದೆ ಎಂದು ಹೇಳಿದರು.

ಕೊಡಗು ಬಲಿಜ ಸಮಾಜ ಈ ಹಿಂದೆ 2018ರಲ್ಲಿ ಬಲಿಜ ಕ್ರೀಡೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ನಂತರ ಜಿಲ್ಲೆಯಲ್ಲಿ ಅತಿವೃಷ್ಠಿ,ಕೊರೋನಾ ಮಹಾಮಾರಿ ಹಿನ್ನೆಲೆ ಕೈಬಿಡಲಾಗಿತ್ತು.ಮುಂದೆಯೂ ಬಲಿಜ ಜನಾಂಗದ ಯುವ ಪೀಳಿಗೆ ಸಂಘಟನೆಗಾಗಿ ಕ್ರೀಡೋತ್ಸವವನ್ನು ಆಯೋಜಿಸಲಾಗುವದು.

ಕೊಡಗು ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬೆಂಗಳೂರಿನ ವಿವಿಧ ದಾನಿಗಳ,ಸಂಘ ಸಂಸ್ಥೆಗಳ ನೆರವಿನೊಂದಿಗೆ ರೂ.5 ಲಕ್ಷದವರೆಗೂ ವಿದ್ಯಾರ್ಥಿವೇತನ ಕಲ್ಪಿಸಲಾಗಿತ್ತು. ಅತಿವೃಷ್ಠಿ ಸಂದರ್ಭ ಜಿಲ್ಲೆಯ ಬಡ ಬಲಿಜರಲ್ಲದೆ, ಇತರೆ ಜನಾಂಗದ ನಿರಾಶ್ರಿತರನ್ನೂ ಗುರುತಿಸಿ ಆಹಾರ ಪದಾರ್ಥ, ಬಟ್ಟೆ, ಔಷಧಿ ಒಳಗೊಂಡಂತೆ ಸುಮಾರು ರೂ. 15 ಲಕ್ಷ ಮೌಲ್ಯದ ದಿನಸಿ ಹಾಗೂ ವಸ್ತುಗಳನ್ನು ವಿತರಿಸಲಾಗಿತ್ತು. ಇದೇ ಸಂದರ್ಭ ರಾಜ್ಯ ಬಲಿಜ ಸಂಘದ ಅಧ್ಯಕ್ಷ, ಬಾಲ್ಡ್‍ವಿನ್ ಶಾಲಾ ಸಂಸ್ಥಾಪಕ ಡಾ.ಟಿ.ವೇಣುಗೋಪಾಲ್, ಬಲಿಜ ಮುಖಂಡ ಶಿರಾ ಗೋವಿಂದಪ್ಪ, ಡಾ.ಬಿ.ಎಂ.ರವಿನಾಯ್ಡು ಮುಂತಾದವರು ನೆರವಿನ ಹಸ್ತ ನೀಡಿದ್ದರು.

ಇದೀಗ ಕೈವಾರ ತಾತಯ್ಯ ಜಯಂತಿಯನ್ನು ಜಿಲ್ಲೆಯ 10 ಗ್ರಾಮ,ನಗರ ಪ್ರದೇಶಗಳಲ್ಲಿ ಅರ್ಥಪೂರ್ಣವಾಗಿ ತಾ.27 ರಂದು ನಡೆಸಲು ತುರ್ತು ಸಭೆಯಲ್ಲಿ ನಿರ್ಧರಿಸಲಾಗಿದೆ. ಕೊಡಗು ಬಲಿಜ ಸಮಾಜದ ಪದಾಧಿಕಾರಿಗಳ ನೇತ್ರತ್ವದಲ್ಲಿ ಆಯಾಯ ಪ್ರದೇಶದಲ್ಲಿ ನಡೆಸಲು ಉದ್ಧೇಶಿಸಿದ್ದು, ನಿರ್ದೇಶಕರಿಗೆ ಕೈವಾರ ತಾತಯ್ಯ ಭಾವಚಿತ್ರವನ್ನು ಕೊಡಗು ಬಲಿಜ ಸಮಾಜ ಮೂಲಕ ವಿತರಿಸಲಾಗುವದು. ಏಪ್ರೀಲ್ ತಿಂಗಳಿನಲ್ಲಿ ವರ್ಷಕ್ಕೊಂದು ಗ್ರಾಮೋತ್ಸವ ಹಾಗೂ ಕೈವಾರ ತಾತಯ್ಯ ಜಯಂತೋತ್ಸವವನ್ನು ರಾಜ್ಯ ಮುಖಂಡರ ಸಮ್ಮುಖದಲ್ಲಿ ಶನಿವಾರಸಂತೆಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ.

ಬಲಿಜ ಭವನ, ಕೈವಾರ ತಾತಯ್ಯ ಮಂದಿರ

ಕೊಡಗು ಜಿಲ್ಲೆಯಲ್ಲಿ ಸೂಕ್ತ ನಿವೇಶನವನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು ಬಲಿಜ ಸಾಂಸ್ಕೃತಿಕ ಭವನ, ಕೈವಾರ ತಾತಯ್ಯ ಧ್ಯಾನ ಮಂದಿರ, ಬಿಎಸ್‍ಸಿ ನರ್ಸಿಂಗ್ ಕಾಲೇಜು, ಪ್ಯಾರಾ ಮೆಡಿಕಲ್ಸ್ ಮುಂತಾದ ಶೈಕ್ಷಣಿಕ ಕೇಂದ್ರವನ್ನು ಸ್ಥಾಪಿಸುವ ಉದ್ಧೇಶವಿದೆ ಎಂದು ಹೇಳಿದರು. ಕೊಡಗು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಸಹಭಾಗಿತ್ವದಲ್ಲಿಯೂ  ತಾ.27 ರಂದು ಕೈವಾರ ತಾತಯ್ಯ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವದು ಎಂದು ಮಾಹಿತಿಯಿತ್ತರು.

ಕೊಡಗು ಬಲಿಜ ಸಮಾಜ ಉಪಾಧ್ಯಕ್ಷರಾದ ಟಿ.ವಿ.ಲೋಕೇಶ್, ಎಸ್.ಕೆ.ಯತಿರಾಜ್, ಗೀತಾ ಹರೀಶ್, ನಿರ್ದೇಶಕರಾದ ಟಿ.ಎಲ್.ಸುಮಾ, ಟಿ.ಎಂ.ಪದ್ಮಾವತಿ, ಕುಮಾರ್, ಪ್ರಕಾಶ್,ಟಿ.ಎನ್.ಲೋಕನಾಥ್, ಟಿ.ಆರ್.ವಿಜಯ, ಟಿ.ವಿ.ಭವಾನಿ,ಟಿ.ಎಚ್.ಮಂಜುನಾಥ್, ಟಿ.ಎನ್.ಮಂಜುನಾಥ್, ಶೋಭಾ ಕಾಂತರಾಜ್, ಟಿ.ಆರ್.ಸುಬ್ರಮಣಿ, ಶರತ್ ನಾಯ್ಡು, ಸಂತೋಷ್ ನಾಯ್ಡು ಮುಂತಾದವರ ಮುಖಂಡತ್ವದಲ್ಲಿ ತಾ.27 ರಂದು ಕೈವಾರ ತಾತಯ್ಯ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ.

ಗೋಷ್ಟಿಯಲ್ಲಿ ಕೊಡಗು ಜಿಲ್ಲಾ ಕೈವಾರ ತಾತಯ್ಯ ಉತ್ಸವ ಸಮಿತಿ ಗೌರವಾಧ್ಯಕ್ಷ ಯತಿರಾಜ್ ನಾಯ್ಡು, ಸಮಾಜದ ಪ್ರಧಾನ ಕಾರ್ಯದರ್ಶಿ ಟಿ.ಸಿ.ಗೀತಾ ನಾಯ್ಡು ಉಪಸ್ಥಿತರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,