Header Ads Widget

Responsive Advertisement

ಬಿಳಿಗೇರಿಯ ಪೆರಾತ ಫ್ರೆಂಡ್ಸ್ ಸಂಘದ ವತಿಯಿಂದ ಜಿಲ್ಲಾಮಟ್ಟದ ಪುರುಷರ ಮುಕ್ತ ವಾಲಿಬಾಲ್ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಮತ್ತು ಗ್ರಾಮೀಣ ಕ್ರೀಡಾಕೂಟ


ಮಡಿಕೇರಿ: ಬಿಳಿಗೇರಿಯ ಪೆರಾತ ಫ್ರೆಂಡ್ಸ್ ಸಂಘದ ವತಿಯಿಂದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಏ.14 ರಂದು ಸಂಘದ ಮೈದಾನದಲ್ಲಿ ಜಿಲ್ಲಾಮಟ್ಟದ ಪುರುಷರ ಮುಕ್ತ ವಾಲಿಬಾಲ್ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಮತ್ತು ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಾಳಾಡಿ ದಿಲೀಪ್‍ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಹರು ಯುವ ಕೇಂದ್ರ ಮಡಿಕೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ಹಾಗೂ ಬಿಳಿಗೇರಿ, ಅರ್ವತ್ತೋಕ್ಲು ಹಾಗೂ ಕುಂಬಳದಾಳು ಗ್ರಾಮದ ಪೆರಾತ ಫ್ರೆಂಡ್ಸ್ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಬಿಳಿಗೇರಿ ಗ್ರಾಮದ ಪೆರಾತ ಫ್ರೆಂಡ್ಸ್ ಸಂಘದ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಕ್ರೀಡಾಕೂಟ ನಡೆಯಲಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಬೆಟ್ಟಗೇರಿ ಗ್ರಾ.ಪಂ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಾಜಿ ಸೈನಿಕ ತುಂತ್ತಜೀರ ಉಲ್ಲಾಸ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಮೇಕೇರಿ ಗ್ರಾ.ಪಂ ಉಪಾಧ್ಯಕ್ಷ ಪೂಜಾರಿರ ರಕ್ಷಿತ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಪಾಲ್ಗೊಳ್ಳಲಿದ್ದಾರೆ.

ಅಪರಾಹ್ನ 4 ಗಂಟೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷ ರ್ಯಾಲಿ ಮಾದಯ್ಯ, ಸದಸ್ಯ ತಳೂರು ದಿನೇಶ್ ಪಾಲ್ಗೊಳ್ಳಲಿದ್ದಾರೆ. ವಿಶೇಷ ಅತಿಥಿಗಳಾಗಿ ಡಾ.ಮೇಜರ್ ಕುಶ್ವಂತ್ ಕೋಳಿಬೈಲು, ಕೂಡಿಗೆ ಕ್ರೀಡಾ ಶಾಲೆ ನಿವೃತ್ತ ಪ್ರಾಂಶುಪಾಲೆ ಕೊಂಬಾರನ ಕುಂತಿ ಬೋಪಯ್ಯ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಏ.12 ಕೊನೆಯ ದಿನಾಂಕ- ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳು ತಮ್ಮ ಹೆಸರನ್ನು ಏ.12 ರ ಒಳಗಾಗಿ ನೋಂದಾಯಿಸಿಕೊಳ್ಳಬೇಕೆಂದು ಸ್ಪಷ್ಟಪಡಿಸಿದರು.

ಬಹುಮಾನ- ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯ ವಿಜೇತ ತಂಡಕ್ಕೆ 20 ಸಾವಿರ ರೂ. ನಗದು, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 15 ಸಾವಿರ ರೂ., ಸೆಮಿಫೈನಲ್ ಪ್ರವೇಶಿಸಿದ ಎರಡು ತಂಡಗಳಿಗೆ ತಲಾ 3500 ರೂ. ನಗದು ಬಹುಮಾನ ನೀಡಲಾಗುತ್ತದೆ. ಹಗ್ಗಜಗ್ಗಾಟ ಪಂದ್ಯಾವಳಿಯ ವಿಜೇತ ತಂಡಕ್ಕೆ 7 ಸಾವಿರ ರೂ., ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 5 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆಂದು ವಿವರಗಳನ್ನಿತ್ತರು.

ಹೆಚ್ಚಿನ ಮಾಹಿತಿಗೆ ಬಾಳಾಡಿ ವಸಂತ ಮೊ.9480955187, ಕಡ್ಯದ ಭರತ್ ಮೊ.9480220055, ಬಾಳಾಡಿ ಮನೋಜ್ ಮೊ.9483780634, ತುಂತಜೀರ ಸತಿಶ್ ಮೊ. 9535626961 ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಬೊಬ್ಬಿರ ಲವ, ಖಜಾಂಚಿ ಕಡ್ಯದ ಭರತ್, ಸದಸ್ಯರಾದ ಬಾಳಾಡಿ ಪ್ರತಾಪ್, ಬಾಳಾಡಿ ಕಿರಣ್ ಹಾಗೂ ತುಂತ್ತಜೀರ ಸತೀಶ್ ಉಪಸ್ಥಿತರಿದ್ದರು.