Header Ads Widget

Responsive Advertisement

ಜಿಲ್ಲಾ ಮಟ್ಟದ ಹತ್ತು ದಿನದ ಬೇಸಿಗೆ ಶಿಬಿರ ಕಾರ್ಯಕ್ರಮ ಉದ್ಘಾಟನೆ


ಜಿಲ್ಲಾ ಮಟ್ಟದ ಬೇಸಿಗೆ ಶಿಬಿರಕ್ಕೆ ಅನಿತಾ ಪೂವಯ್ಯ ಚಾಲನೆ 

ಮಡಿಕೇರಿ ಏ.28: ಯಾವುದೇ ಕ್ಷೇತ್ರದಲ್ಲಿ ಸತತ ಪ್ರಯತ್ನ, ಪರಿಶ್ರಮ ಮತ್ತು ಗುರಿ ಇದ್ದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಹೇಳಿದರು.

       ನಗರದ ಬಾಲಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಬಾಲಭವನ ಸೊಸೈಟಿ ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಹತ್ತು ದಿನದ ಬೇಸಿಗೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

       ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಮಕ್ಕಳು ಪಠ್ಯಕ್ರಮಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಕ್ಕಳ ಜ್ಞಾನ ಮತ್ತು ಪ್ರತಿಭೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಾದ ನೃತ್ಯ, ಸಂಗೀತ ಮುಂತಾದ ಹಲವಾರು ಪಠ್ಯೇತರ ಚಟುವಟಿಕೆ ಹೇಳಿಕೊಡಲಾಗುತ್ತದೆ. ಮಕ್ಕಳು ಬೇಸಿಗೆ ಶಿಬಿರದ ಲಾಭವನ್ನು ಪಡೆಯುವಂತಾಗಬೇಕು ಎಂದು ಅವರು ಹೇಳಿದರು. 

      ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ಮುದ್ದಣ ಅವರು ಮಾತನಾಡಿ ಪ್ರತಿ ವರ್ಷ ರಾಜ್ಯ ಬಾಲಭವನ ವತಿಯಿಂದ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ಮಕ್ಕಳು ಬೇಸಿಗೆ ರಜೆಯಲ್ಲಿ ಮನೆಯಲ್ಲಿ ಸುಮ್ಮನೆ ಇರುವುದರ ಬದಲು ತಮ್ಮ ಬಿಡುವಿನ ವೇಳೆಯಲ್ಲಿ ಯಾವುದಾದರೊಂದು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಲು ಸಹಾಯಕವಾಗಲು ಬೇಸಿಗೆ ಶಿಬಿರದಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

      ಮಕ್ಕಳು ಶಿಕ್ಷಣ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮ ಸಾಮಥ್ರ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಬೇಸಿಗೆ ಶಿಬಿರದಲ್ಲಿ ಮಕ್ಕಳು ತೊಡಗಿಕೊಂಡು ಶಿಬಿರದಲ್ಲಿ ದೊರೆಯುವ ಜ್ಞಾನ ಪಡೆಯುವಂತಾಗಬೇಕು ಎಂದು ಅವರು ಹೇಳಿದರು.

      ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್ ಅವರು ಮಾತನಾಡಿ ಬೇಸಿಗೆ ಶಿಬಿರದ ಮುಖ್ಯ ಉದ್ದೇಶವೆಂದರೆ ಪಠ್ಯಪುಸ್ತಕದಲ್ಲಿನ ವಿಷಯಗಳನ್ನು ಕಲಿಯುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಂಡು ತಮ್ಮ ಸಾಮಥ್ರ್ಯ ಬೆಳೆಸಿಕೊಳ್ಳುವ ದೃಷ್ಟಿಯಿಂದ ಬೇಸಿಗೆ ಶಿಬಿರದಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಬೇಸಿಗೆ ಶಿಬಿರದಂತಹ ಕಾರ್ಯಕ್ರಮಗಳಿಂದ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬಹುದು ಎಂದು ಅವರು ಹೇಳಿದರು.

      ಪೌರಾಯುಕ್ತರಾದ ರಾಮದಾಸ್ ಅವರು ಮಾತನಾಡಿ ಮಕ್ಕಳು ಶಾಲೆಗಳಲ್ಲಿ ಪಠ್ಯ ಚಟುವಟಿಕೆಗಳಲ್ಲಿ ಬಹಳಷ್ಟು ಕಲಿಯುತ್ತಾರೆ. ಆ ದೃಷ್ಟಿಯಿಂದ ಬೇಸಿಗೆ ರಜೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಂಡು ಕಲಿತುಕೊಳ್ಳಲು ಬೇಸಿಗೆ ಶಿಬಿರದಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದರು.

      ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ರೀತಿಯ ಕಲೆ, ಪ್ರತಿಭೆ ಇರುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ನುಡಿಯಂತೆ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿದೆ ಎಂದು ಅವರು ಹೇಳಿದರು.

      ಶಿಬಿರದಲ್ಲಿ ಸಿಗುವ ಜ್ಞಾನವನ್ನು ಪಡೆದು ತಮ್ಮ ಕಲೆಯನ್ನು ವೃದ್ದಿಸಿಕೊಳ್ಳಬೇಕು. ದೇಶದಲ್ಲಿ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಒಂದು ವಿಶೇಷ ಸ್ಥಾನಮಾನವಿದೆ. ಆ ನಿಟ್ಟಿನಲ್ಲಿ ಎಲ್ಲಾ ಶಿಬಿರಾರ್ಥಿಗಳು ಶಿಬಿರದಲ್ಲಿ ಸಿಗುವ ಜ್ಞಾನವನ್ನು ಪಡೆದು ಸಾಧಿಸುವ ಗುರಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

      ಕಾರ್ಯಕ್ರಮದಲ್ಲಿ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಲ್ಲಾ ನಿರೂಪಣಾಧಿಕಾರಿ ಪೂಣಚ್ಚ, ವಿನೋದ ಇತರರು ಇದ್ದರು.

      ಕಾವೇರಿ ನಿರ್ಗತಿಕ ಕುಟಿರದ ಮಕ್ಕಳು ಪ್ರಾರ್ಥಿಸಿದರು, ಸತ್ಯಭಾಮ ಸ್ವಾಗತಿಸಿದರು, ಹಂಸಪ್ರಿಯಾ ನಿರೂಪಿಸಿದರು. ಜಯಂತಿ ವಂದಿಸಿದರು.

      ಇನ್ನಷ್ಟು ಮಾಹಿತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಬಾಲಭವನ ಕೊಡಗು, ನಿನಾಸಂ ತಂಡ ತುಮಕೂರು ಇವರ ವತಿಯಿಂದ ಏಪ್ರಿಲ್, 28 ರಿಂದ ಮೇ, 07 ರವರೆಗೆ ನಡೆಸಲಾಗುವ ಬೇಸಿಗೆ ಶಿಬಿರ ಹಾಗೂ ಪೂರ್ವ ಸಂಚಾರ ಕ್ರಿಯಾ ಯೋಜನೆ. ಬೆಳಗ್ಗೆ 9.30 ರಿಂದ 10.30 ರವರೆಗೆ ಯೋಗ (ಹಂಸಪ್ರಿಯಾ ಯೋಗ ತರಬೇತುದಾರರು) 10.30 ರಿಂದ 11.30 ರವರೆಗೆ ಸಮೂಹ ಗೀತೆ (ಪಾವಣ ಸಮೂಹ ಗೀತೆ ತರಬೇತುದಾರರು) 11.30 ರಿಂದ 12.30 ರವರೆಗೆ ಚಿತ್ರಕಲೆ ಮತ್ತು ಜೇಡಿಮಣ್ಣಿನ ಕಲೆ (ಹಂಸಪ್ರಿಯಾ ಚಿತ್ರಕಲೆ ತರಬೇತಿದಾರರು) 12.30 ರಿಂದ 1.30 ರವರೆಗೆ ನಾಟಕ (ಪಾವನ ನಾಟಕ ತರಬೇತುದಾರರು) 1.30 ರಿಂದ 2.30 ಮಧ್ಯಾಹ್ನದ ಊಟ, 2.30 ರಿಂದ 3.30 ರವರೆಗೆ ಕ್ರಾಪ್ಟ್ ಮತ್ತು ಒಳಾಂಗಣ  ಆಟ(ಹಂಸಪ್ರಿಯಾ ಕ್ರಾಫ್ಟ್ ತರಬೇತಿದಾರರು) 3.30 ರಿಂದ 4.30 ರವರೆಗೆ ನೃತ್ಯ (ಪಾವನ ನೃತ್ಯ ತರಬೇತುದಾರರು). ಮೇ 5 ರಂದು ಒಂದು ದಿನದ ಹೊರ ಸಂಚಾರ ನಾಗರಹೊಳೆ ಪ್ರವಾಸ ಮತ್ತು ಮೇ, 07 ರಂದು ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ ಮತ್ತು ಶಿಬಿರದಲ್ಲಿ ಮಕ್ಕಳಿಗೆ ಕಲಿಸಲಾದ ಚಟುವಟಿಕೆಗಳ ಪ್ರದರ್ಶನ ನಡೆಯಲಿದೆ.