Header Ads Widget

Responsive Advertisement

ತಾಯಿ ಮತ್ತು ಶಿಶು ಮರಣ ತಡೆಯುವಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ: ಡಾ.ಬಿ.ಸಿ.ಸತೀಶ


ತಾಯಿ ಮತ್ತು ಶಿಶು ಮರಣ ತಡೆಯುವಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ: ಡಾ.ಬಿ.ಸಿ.ಸತೀಶ

ಮಡಿಕೇರಿ ಮೇ.18: ಜಿಲ್ಲೆಯಲ್ಲಿ ಕ್ಷಯರೋಗ ನಿಯಂತ್ರಣ ಹಾಗೂ ತಾಯಿ ಮತ್ತು ಶಿಶು ಮರಣ ತಡೆಯುವಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಿರ್ದೇಶನ ನೀಡಿದ್ದಾರೆ. 

     ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕ್ಷಯರೋಗ ನಿಯಂತ್ರಣ, ತಾಯಿ ಮತ್ತು ಶಿಶು ಮರಣ ತಡೆಯುವಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು. 

     ಜಿಲ್ಲೆಯಲ್ಲಿ 92 ಕ್ಷಯ ರೋಗ ಪ್ರಕರಣಗಳು ಕಂಡುಬಂದಿದ್ದು, ಕ್ಷಯರೋಗಕ್ಕೆ ಕಾರಣಗಳು ಮತ್ತಿತರ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ಷಯರೋಗಿಗಳಿಗೆ ಅಗತ್ಯ ಪೌಷ್ಠಿಕ ಆಹಾರ ವಿತರಣೆ ಹಾಗೂ ಔಷಧೋಪಚಾರ ಕಲ್ಪಿಸುವಂತೆ ಐಟಿಡಿಪಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. 

      ಕ್ಷಯರೋಗ ಬರದಂತೆ ಗಮನಹರಿಸುವುದು ಅತಿಮುಖ್ಯ. ಆ ನಿಟ್ಟಿನಲ್ಲಿ ಮಾಹಿತಿ ಶಿಕ್ಷಣ, ಮಾರ್ಗದರ್ಶನದ ಮೂಲಕ ಹೆಚ್ಚಿನ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. 

      ಕ್ಷಯರೋಗ ಜಿಲ್ಲಾ ನಿಯಂತ್ರಣಾಧಿಕಾರಿ ಡಾ.ಆನಂದ್ ಅವರು ಮಾಹಿತಿ ನೀಡಿ ಜಿಲ್ಲೆಯ ಹಾಡಿಗಳಲ್ಲಿ ಹಾಗೂ ಲೈನ್‍ಮನೆಗಳಲ್ಲಿ ವಾಸ ಮಾಡುತ್ತಿರುವವರಲ್ಲಿ ಹೆಚ್ಚಾಗಿ ಕ್ಷಯರೋಗ ಕಂಡು ಬರುತ್ತಿದೆ. 15 ದಿನಕ್ಕೂ ಹೆಚ್ಚು ಅವಧಿಯಲ್ಲಿ ಕೆಮ್ಮು ಇದ್ದಲ್ಲಿ ಕಡ್ಡಾಯವಾಗಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. 2025 ರೊಳಗೆ ಕ್ಷಯರೋಗ ಪ್ರಕರಣಗಳು ಇಲ್ಲದಂತೆ ಮಾಡಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಡಾ.ಆನಂದ್ ಅವರು ಮಾಹಿತಿ ನೀಡಿದರು. 

      ಕ್ಷಯರೋಗ ಪತ್ತೆಯಾಗಿರುವ ಕುಟುಂಬದ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಮತ್ತಿತರ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. 

      ತಾಯಿ ಮತ್ತು ಶಿಶು ಮರಣ ಸಂಬಂಧಿಸಿದಂತೆ ಮಾಹಿತಿ ನೀಡಿದ ಡಾ.ಗೋಪಿನಾಥ್ ಅವರು ಜಿಲ್ಲೆಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಮೂವರು ತಾಯಂದಿರು ನಾನಾ ಕಾರಣಗಳಿಂದ ಮೃತಪಟ್ಟಿದ್ದಾರೆ. ಹಾಗೆಯೇ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 9 ಶಿಶು ಮರಣವಾಗಿದೆ ಎಂದು ಮಾಹಿತಿ ನೀಡಿದರು. 

  ತಾಯಿ ಮತ್ತು ಶಿಶು ಮರಣಕ್ಕೆ ಕಾರಣಗಳು ಮತ್ತಿತರ ಆಡಿಟ್ ವರದಿ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ತಾಯಿ ಮತ್ತು ಶಿಶು ಮರಣ ಆಗದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ‘ಎಸ್‍ಒಪಿ’ ಮಾದರಿ ಸಿದ್ದಪಡಿಸಿ ಎಲ್ಲಾ ಆಸ್ಪತ್ರೆಗಳಿಗೆ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. 

      ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಶಿಶು ಮತ್ತು ತಾಯಿ ಮರಣ ತಡೆಯುವುದು ಹಾಗೆಯೇ ಕ್ಷಯರೋಗ ನಿಯಂತ್ರಣ ಮತ್ತಿತರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಆರೋಗ್ಯ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಸೂಚಿಸಿದರು. 

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಖಾಸಗಿ ವೈದ್ಯರ ನೋಂದಣಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ಲಸಿಕಾ ಕಾರ್ಯಪಡೆ, ಕ್ಷಯರೋಗ ನಿಯಂತ್ರಣ, ಶಿಶು ಮತ್ತು ತಾಯಿ ಮರಣಕ್ಕೆ ಕಾರಣ ಮತ್ತು ಆಡಿಟ್ ವರದಿ ಮತ್ತಿತರ ಬಗ್ಗೆ ಮಾಹಿತಿ ನೀಡಿದರು.   

     ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ವಿಶಾಲ್ ಕುಮಾರ್, ಪ್ರಸೂತಿ ತಜ್ಞರಾದ ಡಾ.ಹರ್ಷ, ಮಕ್ಕಳ ತಜ್ಞರಾದ ಡಾ.ಕುಶ್ವಂತ್ ಕೋಳಿಬೈಲು, ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ.ಪ್ರದೀಪ್, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಯತಿರಾಜು, ಡಾ.ಚೇತನ್, ಡಾ.ಶ್ರೀನಿವಾಸ್, ಜಿಲ್ಲಾ ಆಯೂಷ್ ಅಧಿಕಾರಿ ಡಾ.ರೇಣುಕಾದೇವಿ, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಇತರರು ಇದ್ದರು.