Header Ads Widget

Responsive Advertisement

ಗರ್ಭಿಣಿಯರ ಮತ್ತು ದಿನ ತುಂಬದೆ ಹುಟ್ಟಿದ ಮಕ್ಕಳ ಆರೈಕೆ ಕುರಿತು ತರಬೇತಿ


ಮಡಿಕೇರಿ; ಆರೋಗ್ಯ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿಗಾಗಿ ನಾಗರಿಕ ಸಮ್ಮಿಲನ ಸಂಸ್ಥೆ ಬೆಂಗಳೂರು ಇವರ ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿ ಅವರ ಕಚೇರಿಯಲ್ಲಿ ಬುಧವಾರ ತರಬೇತಿ ಕಾರ್ಯಕ್ರಮ ನಡೆಯಿತು. 

        ತರಬೇತಿಯನ್ನು ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಉದ್ಘಾಟಿಸಿ ಮಾತನಾಡಿ ಗರ್ಭಿಣಿಯರ ಮತ್ತು ದಿನ ತುಂಬದೆ ಹುಟ್ಟಿದ ಮಕ್ಕಳ ಆರೈಕೆ ಬಹಳ ಪ್ರಮುಖ ವಿಷಯವಾಗಿದ್ದು, ಇದಕ್ಕೆ ಕಾರಣವಾದ ರಕ್ತಹೀನತೆ ಬಹುದೊಡ್ಡ ಆರೋಗ್ಯ ಸಮಸ್ಯೆಯಾಗಿದೆ. ಪ್ರತಿ ಗರ್ಭಿಣಿಯರಿಗೆ ಕಾಲ ಕಾಲಕ್ಕೆ ತಪಾಸಣೆ ಮತ್ತು ಆರೈಕೆಗಾಗಿ ಸರ್ಕಾರದ ಹಲವು ಯೋಜನೆಗಳು ಜಾರಿಯಲ್ಲಿದೆ ಎಂದರು. 

       ಕ್ಷೇತ್ರ ಮಟ್ಟದ ಕಾರ್ಯಕರ್ತರಾದ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಪಾತ್ರ ದೊಡ್ಡದಾಗಿದ್ದು, ತೊಡಕಿನ ಗರ್ಭಿಣಿಯರನ್ನು ತಕ್ಷಣವೇ ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದು. ಮತ್ತು ಶಿಕ್ಷಣ,  ಬಾಲ್ಯ ವಿವಾಹ, ಮೂಢನಂಬಿಕೆಗಳ ಕುರಿತು ಮನವರಿಕೆ ಮಾಡುವ ಜವಾಬ್ದಾರಿ ಕ್ಷೇತ್ರ ಮಟ್ಟದ ಕಾರ್ಯಕರ್ತರದಾಗಿದೆ. ಆ ನಿಟ್ಟಿನಲ್ಲಿ ತರಬೇತಿಯನ್ನು ಪಡೆದು ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ಮಾಡುವಂತೆ ಕರೆ ನೀಡಿದರು.

       ಜಿಲ್ಲಾ ಆಸ್ಪತ್ರೆಯ ಬೋಧಕರು ಮತ್ತು ಪ್ರಸೂತಿ ತಜ್ಞ ಡಾ.ಹರ್ಷ ಮತ್ತು ಮಕ್ಕಳ ತಜ್ಞ ಡಾ.ಕುಮಾರ್ ಅವರು ತರಬೇತಿಯಲ್ಲಿ ಹಲವು ಮಾಹಿತಿ ನೀಡಿದರು.

      ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ಯು.ಚೇತನ್, ಸಂಸ್ಥೆಯ ನಿರ್ದೇಶಕರಾದ ಭಗವಾನ್ ದಾಸ್, ಗೋಪಾಲ್, ಪೂರ್ಣಿಮಾ, ವೀರೇಶ್, ವರ್ಷಿಣಿ, ಜಸ್ಮೀತಾ, ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಇದ್ದರು.