Header Ads Widget

Responsive Advertisement

ಭಾಗಮಂಡಲದಲ್ಲಿ ಕಾವೇರಿ ತುಲಾ ಸಂಕ್ರಮಣ ಕುರಿತು ಪೂರ್ವ ಭಾವಿ ಸಭೆಯ ಗೊಂದಲಕ್ಕೆ ಅಮ್ಮ ಕೊಡವ ಸಮಾಜ ಅಸಮದಾನ


ಭಾಗಮಂಡಲದಲ್ಲಿ ಕಾವೇರಿ ತುಲಾ ಸಂಕ್ರಮಣ ಕುರಿತು ಪೂರ್ವ ಭಾವಿ ಸಭೆಯ ಗೊಂದಲಕ್ಕೆ ಅಮ್ಮ ಕೊಡವ ಸಮಾಜ ಅಸಮದಾನ

ತಲಕಾವೇರಿ ಜಾತ್ರೆಯ ಕುರಿತು ಭಾಗಮಂಡಲದಲ್ಲಿ ನಡೆದ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಹೊರ ನಡೆದ ಅಧಿಕಾರಿಗಳ ಕ್ರಮ ಸರಿಯಲ್ಲ, ಇದು ಭಕ್ತರ ಜಾತ್ರೆಯೇ ಹೊರತು ಅಧಿಕಾರಿಗಳ ಜಾತ್ರೆ ಅಲ್ಲಾ, ಭಕ್ತರ ಧಾರ್ಮಿಕ ಭಾವನೆಗೆ ದಕ್ಕೆ ತರುವುದು ಸರಿಯಲ್ಲ ಎಂದು ಅಖಿಲ ಅಮ್ಮ ಕೊಡವ ಸಮಾಜ ಅಸಮದಾನ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಅಧಿಕಾರಿಗಳ ಕ್ರಮವನ್ನು ಖಂಡಿಸಿದ್ದು ಮೂಲ ತಕ್ಕರಾಗಿದ್ದ ಮಂಡೀರ, ಮಣವಟ್ಟೀರ ಹಾಗೂ ಪಟ್ಟಮಾಡ ಕುಟುಂಬದೊಂದಿಗೆ ಅಮ್ಮ ಕೊಡವ ಜನಾಂಗ ಸೇರಿದಂತೆ ಕೇವಲ ನಾಲ್ಕು ಜನರಿಗೆ ಕುಂಡಿಕೆಯ ಸಮೀಪ ನಿಲ್ಲಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿದರಲ್ಲಿ ತಪ್ಪೇನಿದೆ,   ವಿಐಪಿ ವಿವಿಐಪಿಗಳೆಂದು ರಾಜಕಾರಣಿಗಳು, ಅಧಿಕಾರಿಗಳು ಮಾತ್ರ ಅಲ್ಲಾ ಅವರ ಸಂಸಾರದವರಿಗೂ ಮತ್ತು ನೆಂಟರಿಗೂ ಇಲ್ಲಿ ನಿಲ್ಲಲು ಅವಕಾಶ ಮಾಡಿಕೊಡುವಾಗ, ಇಲ್ಲಿನ ಮೂಲ ತಕ್ಕ ಮುಖ್ಯಸ್ಥರು ಹಾಗೂ ಮೂಲ ಅರ್ಚಕ ಕುಟುಂಬವಾದ ನಮಗೆ ನಿಲ್ಲಲು ಅವಕಾಶ ಮಾಡಿಕೊಡಿ ಎಂಬ ಚರ್ಚೆ ನಡೆಯುತ್ತಿದ್ದಾಗ ಇದಕ್ಕೆ ಸರಿಯಾದ ಉತ್ತರ ನೀಡಲು ಸಾದ್ಯವಾಗದೆ ಪಲಾಯನ ಮಾಡಿದ ಅಧಿಕಾರಿಗಳ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಕ್ರಮ ಖಂಡನೀಯ ಎಂದಿದ್ದಾರೆ. 

ನಮ್ಮ ಸಹೋದರರಾದ ಕೊಡವ ಜನಾಂಗದ ಹಿಂದೆ ಅಮ್ಮ ಕೊಡವ ಜನಾಂಗವೇ ನಿಲ್ಲುತ್ತದೆ, ತೀರ್ಥೋದ್ಬವ ಸಂದರ್ಭ ಇಲ್ಲದ ಕಾನೂನನ್ನು ಭಕ್ತರ ಮೇಲೆ ಹೇರಿ ಇಲ್ಲದ ಗೊಂದಲಕ್ಕೆ ಎಡೆ ಮಾಡಿಕೊಟ್ಟರೆ ಇದಕ್ಕೆ ನೇರ ಹೊಣೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಎಂದು ಖಾರವಾಗಿ ನುಡಿದಿದ್ದಾರೆ. ಹಳೆಯ ಪದ್ದತಿಯಂತೆ ತೀರ್ಥ ಸ್ನಾನಕ್ಕೂ ಅವಕಾಶ ಮಾಡಿಕೊಡಬೇಕು, ಅನ್ನದಾನಕ್ಕೂ ಕೂಡ ಅವಕಾಶ ಮಾಡಿಕೊಡಬೇಕು, ಕಾವೇರಿ ತೀರ್ಥೋದ್ಬವ ಎನ್ನುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹಬ್ಬವಾಗದೆ ಸ್ಥಳೀಯ ಮೂಲ ನಿವಾಸಿಗಳ ಹಬ್ಬವಾಗಲಿ ಎಂದು ಅವರು ಒತ್ತಾಯಿಸಿದ್ದಾರೆ.