Header Ads Widget

Responsive Advertisement

ಹೊದ್ದೂರು ಗ್ರಾಮದ ಕಬಡಕೇರಿಯಲ್ಲಿ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆ


ಹೊದ್ದೂರು ಗ್ರಾಮದ ಕಬಡಕೇರಿಯಲ್ಲಿ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆ

ಮೂರ್ನಾಡು : ಹೊದ್ದೂರು ಗ್ರಾಮದ ಕಬಡಕೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಆರ್.ಐ.ಡಿ.ಎಫ್ ಯೋಜನೆಯಡಿ ನಿರ್ಮಿಸಿದ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ರವರು ನೆರವೇರಿಸಿದರು. 


ನಂತರ ಮಾತನಾಡಿದ ಅಪ್ಪಚ್ಚು ರಂಜನ್ ರವರು ಸಮಾಜದ ಒಳಿತಿಗಾಗಿ ಆಯೋಜಿಸಲಾಗುವ ಕಾರ್ಯಗಳಲ್ಲಿ ನಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ದಾನದ ರೂಪದಲ್ಲಿ ವಿನಿಯೋಗ ಮಾಡಿದಾಗ ಸಂತೃಪ್ತಿಯನ್ನು ಕಂಡುಕೊಳ್ಳಬಹುದು ಎಂದು ಹಿತನುಡಿಗಳನ್ನು ಆಡಿದರು. ಅಂಗನವಾಡಿ ಕಟ್ಟಡದ ಕಾಮಗಾರಿ ಉತ್ತಮವಾಗಿದ್ದು ಮಾದರಿ ಅಂಗನವಾಡಿಯಾಗಿ ಮಾರ್ಪಟ್ಟಿದೆ. ಹಲವಾರು ಕಡೆ ಗುತ್ತಿಗೆದಾರರು ಬಂದ ಅನುದಾನದಲ್ಲಿ ಪೂರ್ತಿ ಹಣವನ್ನು ಉಪಯೋಗ ಮಾಡದೆ ಕಳಪೆ ಮಟ್ಟದ ಕಟ್ಟಡಗಳನ್ನು ನಿರ್ಮಿಸಿ ಸರ್ಕಾರಕ್ಕೆ, ಸಾರ್ವಜನಿಕರಿಗೆ ಮೋಸಮಾಡುತ್ತಾರೆ. ಅಂತಹ ಗುತ್ತಿಗೆದಾರರನ್ನು  ಕಪ್ಪು ಪಟ್ಟಿಗೆ ಸೇರಿಸುವ ಕಾರ್ಯಗಳು ಕೂಡ ಆಗುತ್ತಿದೆ. ಕೇಂದ್ರ ಸರ್ಕಾರದಿಂದ ಜಿಲ್ಲೆಗೆ 300 ಕೋಟಿ ಅನುದಾನ ಬಂದಿದ್ದು, ಈಗಾಲೆ ಹಲವಾರು ಕಡೆಗಳಲ್ಲಿ ಕಾಮಗಾರಿಗಳು ಪ್ರಾರಂಭಗೊಂಡಿದೆ. ಹೊದ್ದೂರು ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಗ್ರಾಮಗಳಲ್ಲಿ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಮತ್ತು ಸಾರ್ವಜನಿಕರ ಮಧ್ಯೆ ಹೊಂದಾಣಿಕೆ ಇದ್ದಾಗ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.


ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಮಿಸಿದ್ದ ಮಡಿಕೇರಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ ಸಾರ್ವಜನಿಕರ ಸಹಕಾರವಿದ್ದರೆ ಗ್ರಾಮಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ಹೇಳಿದರು. 

ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಹಮೀದ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ. ಅಬ್ದುಲ್ಲಾ ಸಮಾರಂಭನ್ನುದ್ದೇಶಿಸಿ ಮಾತನಾಡಿದರು. 


ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್. ಎನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಪಿ.ಎ.ಪೂಣಚ್ಚ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಪಿ. ಸವಿತ ಕೀರ್ತನ್, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ರಾಜ್ಯಾಧ್ಯಕ್ಷೆ ರೆಹನಾ ಸುಲ್ತಾನ್,  ಸಹಾಯಕ ಶಿಶು ಅಭವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್, ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವಿಜಯ ಕುಮಾರ್. ಎಸ್.ಪಿ, ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ, ಗ್ರಾಮ ಪಂಚಾಯಿತಿ ಸದಸ್ಯರಾದ ವಾಂಚೀರ ಅಜೆಯ್, ನವೀನ್, ಕೆ.ಆರ್. ಅನಿತ, ಮೊಣ್ಣಪ್ಪ, ಅನಿತ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಪವಿತ್ರ, ಅಂಗನವಾಡಿ ಕಾರ್ಯಕರ್ತೆ ಎಂ.ಇ. ತಂಝೀನಾ ಭಾನು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎ. ಕುಸುಮಾವತಿ ವಹಿಸಿದ್ದರು. 


ನೂತನ ಅಂಗನವಾಡಿ ಕೇಂದ್ರದ ನಿರ್ಮಾಣದಲ್ಲಿ ಹಲವಾರು ರೀತಿಯಲ್ಲಿ ಸಹಾಯ ಸಹಕಾರ ನೀಡಿದ ಸಾರ್ವಜನಿಕರಿಗೆ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಟ್ಟಡ ಗುತ್ತಿಗೆದಾರ ಎನ್. ಜಗದೀಶ್, ಇಂಜಿನಿಯರ್ ಸತೀಶ್, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಜಾನಕಿ ಅವರನ್ನು ಶಾಲು ಹೊದಿಸಿ, ಫಲ-ತಾಂಬೂಲ ನೀಡಿ ಸನ್ಮಾನಿಸಲಾಯಿತು. ಹಾಗೆಯೆ ಮಾದರಿ ಅಂಗನವಾಡಿಯಾಗಿ ಸಜ್ಜುಗೊಳ್ಳಲು ಅವಿರತ ಶ್ರಮಿಸಿದ ಅಂಗನವಾಡಿ ಕಾರ್ಯಕರ್ತೆ ಎಂ.ಇ. ತಂಝೀನಾ ಭಾನು ಅವರನ್ನು ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 


ಅಂಗನವಾಡಿ ಮಕ್ಕಳಿಂದ ಛದ್ಮವೇಷ ಸ್ಪರ್ಧೆ ನಡೆಯಿತು. ಶಾಲಾ ಶಿಕ್ಷಕಿ ಸೌಮ್ಯ ಮತ್ತು ಪೂಜಾಶ್ರೀ ಕಾರ್ಯಕ್ರಮ ನಿರೂಪಿಸಿದರು.  ಶೀಲಾ ಅಶೋಕ್ ಸ್ವಾಗತಿಸಿ, ಸವಿತ ಕೀರ್ತನ್ ಪ್ರಾಸ್ತಾವಿಕ ನುಡಿಯಾಡಿ, ವಂದಿಸಿದರು.

ಚಿತ್ರ-ವರದಿ : ಟಿ. ಸಿ. ನಾಗರಾಜ್, 

ಮೂರ್ನಾಡು