Header Ads Widget

Responsive Advertisement

ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲೇ ಸೇವೆಗೆ ಮೀಸಲಿರಲಿ - ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಿಗೆ ಪತ್ರದ ಮೂಲಕ ಒತ್ತಾಯಿಸಿದ ಹಾರಿಸ್

ಸರ್ಕಾರಿ ವೈದ್ಯರು ಸರ್ಕಾರಿ  ಆಸ್ಪತ್ರೆಯಲ್ಲೇ ಸೇವೆಗೆ ಮೀಸಲಿರಲಿ - ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಿಗೆ ಪತ್ರದ ಮೂಲಕ ಒತ್ತಾಯಿಸಿದ ಹಾರಿಸ್

ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ವೈದ್ಯರು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಖಾಸಗಿ ಕ್ಲಿನಿಕ್ ಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರಿಂದ ಹಣ ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕೆಂದು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ನಾಪೋಕ್ಲುವಿನ  ಕೆ.ಎ. ಹಾರಿಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರಿಗೆ ಪತ್ರ ಬರೆದಿರುವ ಹಾರಿಸ್ ಸಾರ್ವಜನಿಕರ ತೆರಿಗೆ ಹಣದಿಂದ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿರುವ ಸರ್ಕಾರಿ ಖಾಯಂ  ವೈದ್ಯರು ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತ ಮಾಡದೆ ಸೇವೆ ಬದಲಿಗೆ ಹಣ ಗಳಿಕೆಗಾಗಿ ಖಾಸಗಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್ ಗಳಲ್ಲಿ ಕೆಲಸಗಳಿಗೆ ಅನುಮತಿ ನೀಡುವ ಮೂಲಕ ದೇವರಂತೆ ಕಾಣುವ ವೈದ್ಯರನ್ನು ಹಣದ ವ್ಯಾಮೋಹಕ್ಕೆ ಆಸೆಪಡಿಸಿ ಸಾರ್ವಜನಿಕರನ್ನು ಹಣಕ್ಕಾಗಿ ಆರೋಗ್ಯ ಪ್ರಾಣವನ್ನು ಬಲಿಪಡುವಂತಹ ಆಗಬಾರದು.

ಇದರಿಂದ ಸಾರ್ವಜನಿಕರ ತೆರಿಗೆಯಿಂದಲೇ ಸರ್ಕಾರಿ ಆಸ್ಪತ್ರೆ ವೈದ್ಯರು ವೇತನ ಪಡೆದು ಅದೇ ಸಾರ್ವಜನಿಕರು ಮತ್ತೊಮ್ಮೆ ಖಾಸಗಿ ಕ್ಲಿನಿಕ್ ಗಳಲ್ಲಿ ಹಣ ತೆತ್ತುವುದೆಂದರೆ ಮೋಸದ ಜಾಲದಲ್ಲಿ ಸಿಲುಕಿಸಲು  ಸರ್ಕಾರವೇ ಕಾರಣ ವಾದಂತಾಗುತ್ತದೆ ಎಂದರು. ಇದರಿಂದ ನೊಂದ ಬಡ, ಮದ್ಯಮ ವರ್ಗದ ಜನರು ಸರ್ಕಾರದ ಮೇಲೆ ಹಿಡಿ ಶಾಪ ಹಾಕುತ್ತಾರೆ.

ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ   ವೈದ್ಯರು ಖಾಸಗಿ ಕ್ಲಿನಿಕ್ ನಡೆಸಲು ನೀಡಿರುವ ಅನುಮತಿಯನ್ನೇ ಇಲಾಖೆಯ ಮೇಲಾಧಿಕಾರಿಗಳು ವ್ಯತಿರಿಕ್ತ ಆದೇಶಗಳನ್ನು ಮಾಡಿಕೊಂಡು ಲಕ್ಷಾಂತರ ರೂಪಾಯಿ ವೇತನ ಪಡೆದುಕೊಳ್ಳುತ್ತಿರುವ ಸರ್ಕಾರಿ ಖಾಯಂ ವೈದ್ಯರು ಸಹ ಖಾಸಗಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂಗಳನ್ನು ನಡೆಸುತ್ತಿರುವುದರಿಂದ  ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ತಮ್ಮ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂಗಳಿಗೆ ಬರಮಾಡಿಕೊಳ್ಳಲು ಸರ್ಕಾರಿ ಆಸ್ಪತ್ರೆಗಳು ಖಾಸಗಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂಗಳಿಗೆ ಟೋಕನ್ ನೀಡುವ ಮೂಲಕ ಟೋಲ್ ಗೇಟ್  ನಂತಾಗಿದೆ.

ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಕೇವಲ ಬಡವರು ಮತ್ತು ಮಧ್ಯಮ ವರ್ಗದವರೇ ಆಗಿದ್ದು ಅಂತವರಿಂದ ಹಣ ಲೂಟಿ ಮಾಡುವುದಲ್ಲದೆ, ಹಣವಿಲ್ಲದೆ ಮತ್ತು ವೈದ್ಯರ ಹಾಜರಾತಿ ಇಲ್ಲದೆ ಸರಿಯಾದ ಸಮಯಕ್ಕೆ ಚಿಕಿತ್ಸೆಯೂ ಸಿಗದೇ ರೋಗಿಗಳು ಹೆಣವಾಗುತ್ತಿರುವುದು ರಾಜ್ಯದಲ್ಲಿ ನಡೆಯುತ್ತಿದೆ. ಈ ಎಲ್ಲಾ ಕಾರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ  ಸರ್ಕಾರಿ ವೇತನ ಪಡೆಯುತ್ತಿರುವ ಖಾಯಂ ವೈದ್ಯರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಸೇವೆಗೆ ಸೀಮಿತ ಮಾಡಬೇಕು. ವೈದ್ಯರು ಮತ್ತು ಅಧಿಕಾರಿಗಳು ನಿಯಮಾವಳಿ ಪ್ರಕಾರ 24 ಗಂಟೆಯೂ ಸರ್ಕಾರಿ ಸೇವೆಯಲ್ಲಿ ಇರಬೇಕೆಂಬ ಸರ್ಕಾರದ ನಿಯಮಗಳಿದ್ದರೂ ಕರ್ತವ್ಯದ ಸಮಯದಲ್ಲಿ ಅನೇಕ ವೈದ್ಯರು ರಾಜ್ಯದಲ್ಲಿ ತಮ್ಮ ಖಾಸಗಿ ಕ್ಲಿನಿಕ್ ಗಳಿಗೆ ತೆರಳಿ ಕಾರ್ಯನಿರ್ವಹಿಸುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ತುರ್ತು ಚಿಕಿತ್ಸೆ ಸಿಗದೇ ಪ್ರಾಣ ಹಾನಿಯಾಗಿರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದೆ ನಡೆದಿವೆ. 

ಈ ಎಲ್ಲಾ ಉದಾಹರಣೆಗಳನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರ ತೆರಿಗೆ ಹಣದ ಸಂಬಳ ಪಡೆಯುತ್ತಿರುವ ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿನ ಸಾರ್ವಜನಿಕ ಸೇವೆಗೆ ಮಾತ್ರ ಸೀಮಿತವಾಗಿರಬೇಕೆಂದು  ಹಾರಿಸ್ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.  ಸರ್ಕಾರ ಇದಕ್ಕೆ ಸ್ಪಂಧಿಸುವ ವಿಶ್ವಾವಾಸವನ್ನು ವ್ಯಕ್ತಪಡಿಸಿದ ಹಾರಿಸ್, ಸ್ಪಂದಿಸದಿದ್ದರೆ  ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯ ವತಿಯಿಂದ  ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ